ಉಡುಪಿ: ತುಳುನಾಡಿನ ಸಂಶೋಧನಾ ಕ್ಷೇತ್ರದಲ್ಲಿ ನೂರಾರು ಸಂಶೋಧಕರನ್ನು ಸೃಷ್ಟಿಸಿದ ಶ್ರೇಯಸ್ಸು ಪಾದೂರು ಗುರುರಾಜ್ ಭಟ್ ಅವರಿಗೆ ಸಲ್ಲುತ್ತದೆ ಎಂದು ಮೂಡುಬಿದಿರೆಯ ಸಂಶೋಧಕ ಪಿ.ಗಣಪಯ್ಯ ಭಟ್ ಹೇಳಿದರು.
ಗುರುರಾಜ್ ಭಟ್ ಸ್ಮಾರಕ ಟ್ರಸ್ಟ್ ಉಡುಪಿ, ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಶಿಕ್ಷಕರ ಸಂಘ ‘ಮಾನುಷ’ ಮತ್ತು ಐಕ್ಯುಎಸಿ ಸಂಯುಕ್ತಾಶ್ರಯದಲ್ಲಿ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ, ಕಾಲೇಜಿನ ಪ್ರಥಮ ಪ್ರಾಂಶುಪಾಲ ಗುರುರಾಜ ಭಟ್ ಅವರ ಜನ್ಮ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗುರುರಾಜ್ ಅವರು ಇತಿಹಾಸ ಕ್ಷೇತ್ರದ ಸಂಶೋಧನೆಗೆ ಮಾರ್ಗಸೂಚಿಯನ್ನು ರೂಪಿಸಿದವರಾಗಿದ್ದು, ಆ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ಅನನ್ಯ ಎಂದರು.
ಶಿಲ್ಪಕಲೆ ಮತ್ತು ಐತಿಹಾಸಿಕ ಪ್ರಾಮುಖ್ಯತೆಯ ಸ್ಥಳಗಳಿಗೆ ಮೈಲಿಗಟ್ಟಲೆ ಬರಿಗಾಲಿನಲ್ಲೇ ನಡೆದಾಡಿ ಅಧ್ಯಯನ ಮಾಡುತ್ತಿದ್ದ ಗುರುರಾಜ ಭಟ್ ಅವರು, ಸಾಮಾಜಿಕ ಜಾಲತಾಣಗಳಿಲ್ಲದ ಐವತ್ತರ ದಶಕದಲ್ಲೇ ಜಗತ್ತಿಗೆ ತಿಳಿದಿರುವ ವ್ಯಕ್ತಿಯಾಗಿದ್ದರು ಎಂದು ಪ್ರಾಂಶುಪಾಲ ವಿನ್ಸೆಂಟ್ ಆಳ್ವ ಹೇಳಿದರು.
ಟ್ರಸ್ಟ್ ಸದಸ್ಯ ಪರಶುರಾಮ ಭಟ್, ಸಾಹಿತಿ ಮುರಳೀಧರ ಉಪಾಧ್ಯಾಯ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಬಿ. ಜಗದೀಶ್ ಶೆಟ್ಟಿ, ‘ಮಾನುಷ’ ಉಪಾಧ್ಯಕ್ಷ ರಾಬರ್ಟ್ ರಾಡ್ರಿಗಸ್, ಉಪ ಪ್ರಾಂಶುಪಾಲರಾದ ಸೋಫಿಯಾ ಡಯಾಸ್, ಶಾಲೆಟ್ ಮಥಿಯಾಸ್, ಗುರುರಾಜ್ ಭಟ್ ಅವರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.
ಕಾಲೇಜಿನ ಐಕ್ಯುಎಸಿ ಸಂಯೋಜಕ ಜಯರಾಮ ಶೆಟ್ಟಿಗಾರ್ ಸ್ವಾಗತಿಸಿದರು. ಹರಿಣಾಕ್ಷಿ ಎಂ.ಡಿ. ವಂದಿಸಿದರು. ರವಿನಂದನ್ ಭಟ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.