ಹೆಬ್ರಿ: ಕ್ಯಾಂಪ್ಕೊ ಸಂಸ್ಥೆ 50 ವರ್ಷಗಳಿಂದ ರೈತರಿಗೆ, ಬೆಳೆಗಾರರಿಗೆ ಉತ್ತಮ ಬೆಲೆ ನೀಡುತ್ತಾ ರೈತರ ಕಲ್ಯಾಣ ಮಾಡುತ್ತಿದೆ. ಕ್ಯಾಂಪ್ಕೊ ಮತ್ತು ಕರ್ನಾಟಕ ಬ್ಯಾಂಕಿಗೆ ಉತ್ತಮ ಸಂಬಂಧ ಇದೆ. ಕ್ಯಾಂಪ್ಕೊ ರೈತರ ಅನುಕೂಲಕ್ಕಾಗಿ ಹೆಚ್ಚು ಶಾಖೆಗಳನ್ನು ತೆರೆಯುವಂತಾಗಲಿ ಎಂದು ಕರ್ಣಾಟಕ ಬ್ಯಾಂಕ್ ಜನರಲ್ ಮೆನೇಜರ್ ಎಸ್. ರವಿಚಂದ್ರನ್ ಹೇಳಿದರು.
ಅವರು ಶನಿವಾರ ಇಲ್ಲಿ ಕ್ಯಾಂಪ್ಕೊ ನಿಯಮಿತದ ನೂತನ ಕಚೇರಿ, ಗೋದಾಮು, ಸದಸ್ಯ ಬೆಳೆಗಾರ ಸಭೆ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಮಾತನಾಡಿ, ರೈತರ ಬೇಡಿಕೆಗೆ ಸಂಸ್ಥೆ ಸ್ಪಂದಿಸಿದೆ. ನೂತನ ಕಚೇರಿ, ಗೋದಾಮು ತೆರೆಯುವ ಮೂಲಕ ಹೆಬ್ರಿಯ ರೈತರ ಕನಸು ನನಸು ಮಾಡಿದ್ದೇವೆ. ರೈತರಿಗೆ ಉತ್ತಮ ಧಾರಣೆ ನೀಡುವ ಮೂಲಕ ರೈತರ ರಕ್ಷಣೆ ಕಾರ್ಯ ಮಾಡುತ್ತಿದೆ. ಬೆಳೆಗಾರರಿಗೆ ಆರೋಗ್ಯ ರಕ್ಷಣೆ, ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ರೈತರು ಸಂಸ್ಥೆಯನ್ನು ಮುನ್ನಡೆಸಿ ಎಂದು ಮನವಿ ಮಾಡಿದರು.
ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ. ಸತ್ಯನಾರಾಯಣ ಮಾತನಾಡಿ, ಅಡಿಕೆಯನ್ನು ಹೆಬ್ರಿಯ ಬ್ರ್ಯಾಂಡ್ ಆಗಿ ಪರಿವರ್ತಿಸಲು ರೈತರು ಸಹಕಾರ ನೀಡಬೇಕು ಎಂದರು.
ಶಾಖೆಗೆ ಪ್ರಥಮವಾಗಿ ಅಡಿಕೆ ಮಾರಾಟ ಮಾಡಿದ ಗುಲಾಬಿ ಶೆಟ್ಟಿ ಮುದ್ರಾಡಿ, ಕಬ್ಬಿನಾಲೆ ರಾಮಕೃಷ್ಣ ಹೆಬ್ಬಾರ್ ಅವರಿಗೆ ನಗದು ಪಾವತಿಸಲಾಯಿತು. ಕಟ್ಟಡ ಗುತ್ತಿಗೆದಾರ ಗೋಪಾಲ ಭಟ್ ಉಡುಪಿ, ಎಂಜಿನಿಯರ್ ಎಂ.ಡಿ. ಗಣೇಶ್ ಅವರನ್ನು ಸನ್ಮಾನಿಸಲಾಯಿತು. ಕೃಷಿಕರಾದ ಎಚ್. ರಾಜೀವ ಶೆಟ್ಟಿ ಹೆಬ್ರಿ, ಎಚ್. ವಾದಿರಾಜ ಶೆಟ್ಟಿ ಸಭೆಯಲ್ಲಿ ರೈತರ ಕಲ್ಯಾಣಕ್ಕೆ ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಬಂಗೇರ, ಕ್ಯಾಂಪ್ಕೊ ನಿಯಮಿತ ಉಪಾಧ್ಯಕ್ಷ ಶಂಕರನಾರಾಯಣ ಭಟ್ ಖಂಡಿಗೆ, ನಿರ್ದೇಶಕರಾದ ಸತೀಶ್ಚಂದ್ರ, ಸುರೇಶ್ ಕುಮಾರ್ ಶೆಟ್ಟಿ ಕಾಸರಗೋಡು, ಡಾ.ಜಯಪ್ರಕಾಶ್, ರಾಘವೇಂದ್ರ ಭಟ್ ಕೆದಿಲ, ಮಹೇಶ್ ಚೌಟ, ಗತ್ತಿಕೆರೆ ರಾಘವೇಂದ್ರ, ಬಾಲಕೃಷ್ಣ ರೈ, ಕ್ಯಾಂಪ್ಕೊ ನಿವೃತ್ತ ಅಧಿಕಾರಿ ಪ್ರಮೋದ್, ಜನರಲ್ ಮ್ಯಾನೇಜರ್ ಗೋವಿಂದ ಭಟ್, ಹಣಕಾಸು ವಿಭಾಗದ ಅಧಿಕಾರಿ ಪರಮೇಶ್ವರ್ ಇದ್ದರು. ನಿರ್ದೇಶಕ ದಯಾನಂದ ಹೆಗ್ಡೆ ಸ್ವಾಗತಿಸಿದರು. ಜಯ ಭಂಡಾರಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.