ಉಡುಪಿ: ಪುತ್ತಿಗೆ ಮಠದ ವಿಶ್ವ ಗೀತಾ ಪರ್ಯಾಯಕ್ಕೆ ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಜಪಾನ್ ದೇಶದ ರೆವ್ ಕೋಶೋ ನಿವಾನೋ ನೇತೃತ್ವದ 7 ಸದಸ್ಯರ ನಿಯೋಗ ಶುಕ್ರವಾರ ಎಲ್ಲೂರು ಸಮೀಪದ ಕೆಮುಂಡೇಲು ಅನುದಾನಿತ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು. ಭೇಟಿ ವೇಳೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಬಡಿಸಿ ಸಂಭ್ರಮಿಸಿದರು.
ಜಪಾನಿನ ರಿಷ್ಯೋ ಕೊಸೈ ಕಾಯ್ ಸಂಸ್ಥೆಯ ನಿಯೋಜಿತ ಮಹಾ ಅಧ್ಯಕ್ಷೆ ರೆವ್ ಕೋಶೋ ನಿವಾನೋ ಮಾತನಾಡಿ, ಮಕ್ಕಳಲ್ಲಿ ಶಿಸ್ತು ಮತ್ತು ಸೇವೆ ಜೀವನದ ಅವಿಭಾಜ್ಯ ಅಂಗವಾಗಿರಬೇಕು ಎಂದು ಹೇಳಿದರು.
ಇದೇವೇಳೆ ಪರ್ಯಾಯ ಮಹೋತ್ಸವಕ್ಕೆ ಆಹ್ವಾನಿಸಿದ್ದಕ್ಕೆ ಪುತ್ತಿಗೆ ಶ್ರೀಗಳಿಗೆ ಕೃತಜ್ಞತೆ ಸಲ್ಲಿಸಿದರು. ಶಾಲೆಯ ಮುಖ್ಯ ಶಿಕ್ಷಕ ಜಗನ್ನಾಥ ಶೆಟ್ಟಿ, ಅಧ್ಯಾಪಕ ಚಂದ್ರಹಾಸ ಪ್ರಭು ಶಾಲೆಯ ವೈಶಿಷ್ಟ್ಯ ವಿವರಿಸಿದರು.
ಶಾಲೆಯ ವಿದ್ಯಾರ್ಥಿಗಳು ಭಗವದ್ಗೀತೆಯ ಶ್ಲೋಕಗಳನ್ನು ಸುಶ್ರಾವ್ಯವಾಗಿ ಹಾಡಿದಾಗ ನಿಯೋಗದಲ್ಲಿದ್ದ ಸದಸ್ಯರು ತಲೆದೂಗಿದರು.
ಪರ್ಯಾಯ ಮಹೋತ್ಸವಕ್ಕೆ ಆಗಮಿಸಿದ ಜಪಾನ್ ದೇಶದ ನಿಯೋಗದ ಭೇಟಿಯ ಉಸ್ತುವಾರಿ ವಹಿಸಿರುವ ಅಮೆರಿಕದ ವಿಜ್ಞಾನಿ, ಡಾ.ಎ.ಕೇಶವರಾಜ್ ಅವರು ರೆವ್ ಕೋಶೋ ನಿವಾನೋ ಅವರನ್ನು ಪರಿಚಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.