ADVERTISEMENT

ಸ್ಯಾನಿಟರಿ ಪ್ಯಾಡ್, ನ್ಯಾಪ್‌ಕಿನ್ ವಿಲೇವಾರಿ ಘಟಕ ಉದ್ಘಾಟನೆ

ಪಡುಬಿದ್ರಿ: ಅದಾನಿ ಫೌಂಡೇಷನ್‌ನ ಸಿಎಸ್‌ಆರ್ ಯೋಜನೆಯಡಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 15:55 IST
Last Updated 18 ಸೆಪ್ಟೆಂಬರ್ 2024, 15:55 IST
ಪಡುಬಿದ್ರಿ ಗ್ರಾಮದಲ್ಲಿ ಸ್ಯಾನಿಟರ್ ಪ್ಯಾಡ್ ಇನ್ಸಿನರೇಟರ್ ಘಟಕವನ್ನು ಲೋಕಾರ್ಪಣೆ ಮಾಡಲಾಯಿತು
ಪಡುಬಿದ್ರಿ ಗ್ರಾಮದಲ್ಲಿ ಸ್ಯಾನಿಟರ್ ಪ್ಯಾಡ್ ಇನ್ಸಿನರೇಟರ್ ಘಟಕವನ್ನು ಲೋಕಾರ್ಪಣೆ ಮಾಡಲಾಯಿತು   

ಪಡುಬಿದ್ರಿ: ಎಲ್ಲೂರು ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಅದಾನಿ ಸಮೂಹದ ಅದಾನಿ ಪವರ್ ಲಿಮಿಟೆಡ್‌ನ ಸಿಎಸ್‌ಆರ್ ಅನುದಾನದಡಿ ಪಡುಬಿದ್ರಿ ಗ್ರಾಮದಲ್ಲಿ ₹15 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸ್ಯಾನಿಟರ್ ಪ್ಯಾಡ್ ಇನ್ಸಿನರೇಟರ್ ಘಟಕವನ್ನು ಬುಧವಾರ ಲೋಕಾರ್ಪಣೆ ಮಾಡಲಾಯಿತು.

ಅದಾನಿ ಫೌಂಡೇಷನ್‌ನ ಸಿಎಸ್‌ಆರ್ ಯೋಜನೆಗಳಲ್ಲಿ ಒಂದಾದ ಗ್ರಾಮೀಣ ಮೂಲಭೂತ ಸೌಕರ್ಯ ಯೋಜನೆಯಡಿ ಪಡುಬಿದ್ರಿ ಗ್ರಾಮದಲ್ಲಿ, ಪಂಚಾಯತಿಯು 2023–24ನೇ ವಾರ್ಷಿಕ ಸಾಲಿನಲ್ಲಿ ನೀಡಿದ ಕ್ರಿಯಾ ಯೋಜನೆ ಮೇರೆಗೆ ಘಟಕ ನಿರ್ಮಿಸಲಾಗಿದೆ. ಅದಾನಿ ಸಮೂಹದ ಅಧ್ಯಕ್ಷ, ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಕಿಶೋರ್ ಆಳ್ವ, ಸ್ಯಾನಿಟರಿ ಪ್ಯಾಡ್‌ಗಳನ್ನು ಸುಡುವ ಯಂತ್ರವನ್ನು ಸ್ಥಾಪಿಸಲು ಅದಾನಿ ಫೌಂಡೇಷನ್ ಈ ಉತ್ತಮ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ. ಘಟಕದಲ್ಲಿ ‌ಗಂಟೆಗೆ ಸುಮಾರು 60 ಕಿಲೋ ಸ್ಯಾನಿಟರ್ ಪ್ಯಾಡ್‌ಗಳನ್ನು ದಹಿಸಬಹುದು. ಗ್ರಾಮೀಣ ಪ್ರದೇಶದಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನರೇಟರ್ ಯಂತ್ರಗಳನ್ನು ಅಳವಡಿಸುವುದರಿಂದ ನೈರ್ಮಲ್ಯ, ಕಸ ನಿರ್ವಹಣೆಯನ್ನು ಉತ್ತೇಜಿಸಬಹುದು. ಬಳಸಿದ ಸ್ಯಾನಿಟರಿ ಪ್ಯಾಡ್‌, ನ್ಯಾಪ್‌ಕಿನ್‌ಗಳನ್ನು ತೆರೆದ ಸ್ಥಳಗಳಲ್ಲಿ ಅಥವಾ ಅನೈರ್ಮಲ್ಯದ ರೀತಿಯಲ್ಲಿ ವಿಲೇವಾರಿ ಮಾಡುವುದರಿಂದ ಉಂಟಾಗುವ ಪರಿಸರ, ಆರೋಗ್ಯದ ಅಪಾಯಗಳನ್ನು ತಪ್ಪಿಸಬಹುದು ಎಂದರು.

ADVERTISEMENT

ಪಡುಬಿದ್ರಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಿಎಸ್‌ಆರ್ ಅನುದಾನಡಿ ₹4 ಕೋಟಿಯಷ್ಟು ವೆಚ್ಚದ ಮೂಲ ಸೌಕರ್ಯ ಅಭಿವೃದ್ಧಿಗೆ ಅದಾನಿ ಸಮೂಹ ಘೋಷಿಸಿದ್ದು, ಹಂತ ಹಂತವಾಗಿ ಪಂಚಾಯಿತಿ ನೀಡುವ ಕ್ರಿಯಾ ಯೋಜನೆ ಪ್ರಕಾರ ಅನುಷ್ಠಾನಗೊಳಿಸಲಾಗುತ್ತಿದೆ. ಇದುವರೆಗೆ ₹1.90 ಕೋಟಿ ಮೌಲ್ಯದ ಅಭಿವೃದ್ಧಿ ಕೆಲಸಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.

ಗ್ರಾ.ಪಂ. ಅಧ್ಯಕ್ಷೆ ಶಶಿಕಲಾ ಮಾತನಾಡಿ, ಗ್ರಾಮಸ್ಥರ ಬೇಡಿಕೆ ಮೇರೆಗೆ, ಪರಿಸರ ದೃಷ್ಟಿಕೋನದಿಂದ ಸ್ಯಾನಿಟರಿ ಸುಡುವ ಯಂತ್ರ ಸ್ಥಾಪಿಸಬೇಕೆಂದು ಮನವಿ ಮಾಡಿದ್ದು, ಅದಾನಿ ಸಂಸ್ಥೆ ಬೇಡಿಕೆ ಈಡೇರಿಸಿರುವುದು ಸಂತಸ ತಂದಿದೆ ಎಂದರು.

ಉಪಾಧ್ಯಕ್ಷ ಹೇಮಚಂದ್ರ, ಸದಸ್ಯರಾದ ನವೀನ್ ಎನ್.ಶೆಟ್ಟಿ, ಗಣೇಶ್ ಕೋಟ್ಯಾನ್, ಶೋಭಾ ಶೆಟ್ಟಿ, ಅಶೋಕ್ ಪೂಜಾರಿ, ರಮೀಝ್ ಹುಸೈನ್, ನಿಯಾಝ್, ಸುನಂದ, ವಿದ್ಯಾಶ್ರೀ, ಜ್ಯೋತಿ ಮೆನನ್, ಸಂದೇಶ್ ಶೆಟ್ಟಿ, ಶಾಫಿ, ಅದಾನಿ ಪವರ್ ಲಿಮಿಟೆಡ್‌ನ ಎಜಿಎಂ ರವಿ ಆರ್. ಜೇರೆ, ಅನುದೀಪ್ ಇದ್ದರು.

ವ್ಯಾಪಾರ ಕೇಂದ್ರವಾಗಿ ಪರಿವರ್ತನೆ

ಕಾಪು ತಾಲೂಕಿನ ದೊಡ್ಡ ಪಂಚಾಯಿತಿ ಆಗಿರುವ ಪಡುಬಿದ್ರಿ ವ್ಯಾಪ್ತಿಯಲ್ಲಿ ಹಲವಾರು ಕೈಗಾರಿಕಾ ಪ್ರದೇಶಗಳು ಸ್ಥಾಪನೆಯಾಗಿದ್ದು ಉತ್ತಮ ವ್ಯಾಪಾರ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಸುತ್ತಮುತ್ತಲ ಗ್ರಾಮಗಳು ಅಭಿವೃದ್ಧಿಗೊಂಡಿವೆ ಎಂದು ಅದಾನಿ ಸಮೂಹದ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಹರ್ಷವ್ಯಕ್ತಪಡಿಸಿದರು.

ಗ್ಯಾಸ್ ವಿತರಣೆಗೆ ಆದ್ಯತೆ: ಅದಾನಿ ಸಮೂಹ ಪ್ರತಿ ಮನೆಗೂ ಗ್ಯಾಸ್ ವಿತರಿಸುವ ಸಿಟಿ ಗ್ಯಾಸ್ ವಿತರಣೆ ಯೋಜನೆಯಡಿ ಪಡುಬಿದ್ರಿ ಗ್ರಾಮ ಪಂಚಾಯಿಯನ್ನು ಮೊದಲ ಆದ್ಯತೆಯಾಗಿ ಆಯ್ಕೆ ಮಾಡಿದೆ ಎಂದು ಆಳ್ವ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.