ಕಾಪು (ಪಡುಬಿದ್ರಿ): ಆಟಗಾರರ ಮಿದುಳನ್ನು ಜಾಗೃತಗೊಳಿಸುವ, ಬುದ್ಧಿಮತ್ತೆ ಹೆಚ್ಚಿಸುವ ಕ್ರೀಡೆ ಚದುರಂಗ ಎಂದು ಪಡುಬಿದ್ರಿಯ ಎಸ್ಇಝೆಡ್ ಆಸ್ಪೆನ್ ಇನ್ಫ್ರಾ ಪ್ರೈವೆಟ್ ಸಂಸ್ಥೆಯ ಮಹಾಪ್ರಬಂಧಕ ಅಶೋಕ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಇಲ್ಲಿನ ಹಳೆಮಾರಿಗುಡಿ ದೇವಸ್ಥಾನದದಲ್ಲಿ ಶ್ರೀನಾರಾಯಣ ಗುರು ಸ್ಕೂಲ್ ಆಫ್ ಚೆಸ್ ಉಡುಪಿ ಮತ್ತು ಕಾಪು ಆಶ್ರಯದಲ್ಲಿ 2 ದಿನಗಳ ರಾಷ್ಟ್ರಮಟ್ಟದ ಫಿಡೆ ರೇಟೆಡ್ ರ್ಯಾಪಿಡ್ ಚೆಸ್ ‘22ನೇ ಶ್ರೀನಾರಾಯಣ ಗುರು ಟ್ರೋಫಿ’ ಚೆಸ್ ಟೂರ್ನಿಗೆ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ಕ್ರೀಡೆ ಆಗಿರುವ ಚದುರಂಗದಲ್ಲಿ ಹಲವು ಭಾರತೀಯರು ಸಾಧನೆ ಮಾಡಿದ್ದಾರೆ. ಕಾಪುವಿನಂತಹ ಗ್ರಾಮೀಣ ಪ್ರದೇಶದಲ್ಲಿ ರಾಷ್ಟ್ರಮಟ್ಟದ ಟೂರ್ನಿ ಆಯೋಜಿಸುವ ಮೂಲಕ ರಾಷ್ಟ್ರಮಟ್ಟದ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವುದು ಅಭಿನಂದನಾರ್ಹ ಎಂದರು.
ಅಶೋಕ್ ಕುಮಾರ್ ಶೆಟ್ಟಿ, ಕೈಪುಂಜಾಲು ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ರಮೇಶ್ ಆರ್.ಪೂಜಾರಿ ಚೆಸ್ ಕಾಯಿ ಮುನ್ನಡೆಸುವ ಮೂಲಕ ಟೂರ್ನಿಗೆ ಚಾಲನೆ ನೀಡಿದರು. ಹಳೆಮಾರಿಗುಡಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಶ್ರೀಧರ್ ಶೆಣೈ ದೀಪ ಬೆಳಗಿದರು. ಮಂಗಳೂರು ಎಫಿಲೆನ್ಸ್ ಟೆಕ್ನಾಲಜೀಸ್ ಡಿಜಿಟಲ್ ಮಾರ್ಕೆಟಿಂಗ್ ಕಂಪನಿ ಸ್ಥಾಪಕ ಅವಿನಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಶುಭಾಶಂಸನೆಗೈದರು. ಶ್ರೀನಾರಾಯಣ ಗುರು ಸ್ಪೋರ್ಟ್ಸ್ ಆ್ಯಂಡ್ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಉಮಾನಾಥ್ ಕಾಪು, ಪೆನ್ವೇಲ್ ಸೋನ್ಸ್, ನಾರಾಯಣ ಸೇರಿಗಾರ್, ಲಕ್ಷ್ಮಿನಾರಾಯಣ ಆಚಾರ್ಯ, ನಾಗೇಶ್ ಕಾರಂತ್, ಮುಖ್ಯ ತೀರ್ಪುಗಾರ ವಸಂತ್ ಬಿ.ಎಚ್. ಬೆಂಗಳೂರು ಇದ್ದರು. ಸಂಸ್ಥೆಯ ಸ್ಥಾಪಕ ಫಿಡೆ ಆರ್ಬಿಟರ್, ಕೋಚ್ ಸಾಕ್ಷಾತ್ ಯು.ಕೆ. ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ನಿರ್ದೇಶಕಿ ಸೌಂದರ್ಯ ಯು.ಕೆ. ನಿರೂಪಿಸಿದರು.
442 ಸ್ಪರ್ಧಿಗಳು: ಕಾಪುವಿನಲ್ಲಿ ಪ್ರಥಮ ಬಾರಿಗೆ ನಡೆದ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಗೆ ಎಫಿಲೆನ್ಸ್ ಟೆಕ್ನಾಲಜೀಸ್ ಮಾರ್ಕೆಟಿಂಗ್ ಕಂಪನಿ ಮಂಗಳೂರು, ಯುಡಿಸಿಎ ಉಡುಪಿ, ಕೆಎಸ್ಸಿಎ, ಎಐಸಿಎಸ್ ಫಿಡೆ ಸಹಕಾರ ನೀಡಿದ್ದವು. ಕರ್ನಾಟಕ, ಗೋವಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ನವದೆಹಲಿ, ಪಶ್ಚಿಮ ಬಂಗಾಳ ಸಹಿತ ವಿವಿಧ ರಾಜ್ಯಗಳ 442 ಸ್ಪರ್ಧಿಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.