ಕಾರ್ಕಳ (ಉಡುಪಿ): 2011ರಲ್ಲಿ ನಡೆದಿದ್ದ ಈದು ಗ್ರಾಮದ ಗುಂಡಿ ಸದಾಶಿವ ಗೌಡ ಎಂಬುವರ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪದಲ್ಲಿ ಬಂಧಿತರಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಂಕಿತ ನಕ್ಸಲರಾದ ಬೆಂಗಳೂರಿನ ರಮೇಶ್, ಚಿಕ್ಕಮಗಳೂರಿನ ಕನ್ಯಾ ಕುಮಾರಿ ಅವರನ್ನು ಬೆಂಗಳೂರು ಪೊಲೀಸರು ಭದ್ರತೆಯಲ್ಲಿ ಸೋಮವಾರ ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಪೊಲೀಸ್ ಮಾಹಿತಿದಾರ ಎಂಬ ಕಾರಣಕ್ಕಾಗಿ ಸದಾಶಿವ ಗೌಡ ಅವರನ್ನು ಅಪಹರಿಸಿದ್ದ ನಕ್ಸಲರ ತಂಡ ಕಬ್ಬಿನಾಲೆಯ ದಟ್ಟ ಅರಣ್ಯದಲ್ಲಿ ಭೀಕರವಾಗಿ ಹತ್ಯೆಗೈದು ಪರಾರಿಯಾಗಿತ್ತು. ಪ್ರಕರಣದ ತನಿಖೆ ನಡೆಸಿದ್ದ ಹೆಬ್ರಿ, ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ರಮೇಶ್, ಕನ್ಯಾ ಕುಮಾರಿ ಸಹಿತ ಹಲವು ಆರೋಪಿಗಳನ್ನು ಬಂಧಿಸಿದ್ದರು. ರಮೇಶ್, ಕನ್ಯಾ ಕುಮಾರಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿಗಳಾಗಿದ್ದಾರೆ.
ಕಾರ್ಕಳ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಅ. 21ಕ್ಕೆ ಮುಂದೂಡಿದರು.
ನ್ಯಾಯಾಲಯದಿಂದ ಹೊರಬಂದ ರಮೇಶ್, ಕನ್ಯಾ ಕುಮಾರಿ ಅವರು ‘ನಕ್ಸಲರು ದೇಶಭಕ್ತರು’, ‘ಮಾವೋವಾದ ಜಿಂದಾಬಾದ್’ ಎಂದು ಘೋಷಣೆ ಕೂಗಿದರು. ಬಳಿಕ ಪೊಲೀಸರು ಭಾರೀ ಭದ್ರತೆಯಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಅವರನ್ನು ಕರೆದೊಯ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.