ಶಿರ್ವ: ಕಟಪಾಡಿ ಏಣಗುಡ್ಡೆ ಯುವಜನ ಸೇವಾ ಸಂಘ, ಉಡುಪಿ ಜಿಲ್ಲಾ ತೋಟಗಾರಿಕೆ ಮತ್ತು ಕೃಷಿ ಇಲಾಖೆ, ಮಂಗಳೂರು ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ವತಿಯಿಂದ ಕಟಪಾಡಿ ಎಸ್.ವಿ.ಎಸ್ ಹೈಸ್ಕೂಲ್ನಲ್ಲಿ 2 ದಿನ ನಡೆದ ಹಲಸು ಮೇಳ–2024 ಮಳೆಯ ನಡುವೆಯೂ ಗ್ರಾಮೀಣ ಜನರನ್ನು ಆಕರ್ಷಿಸಿತು.
ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಲ್ಲಿ ಹೊಸ ಸಂಚಲನ ಮೂಡಿಸಿರುವ ಹಲಸು ಮೇಳದಲ್ಲಿ ಹಲಸಿನ ವಿವಿಧ ಖಾದ್ಯಗಳು ಗಮನ ಸೆಳೆದಿವೆ. ಈ ಮೂಲಕ ಹಲಸು ವಿಶ್ವವಿಖ್ಯಾತವಾಗುವಂತಾಗಿದೆ ಎಂದರು.
ಜಿಲ್ಲಾ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಹೇಮಂತ ಕುಮಾರ್ ಎಲ್, ಕಟಪಾಡಿ ಗ್ರಾಮ ಪಂಚಾಯಿತಿ ಸದಸ್ಯ ಸುಭಾಸ್ ಬಲ್ಲಾಳ್, ಅರುಣ್ ಶೆಟ್ಟಿ ಪಾದೂರು, ಏಣಗುಡ್ಡೆ ಯುವಜನ ಸೇವಾ ಸಂಘದ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಕಾರ್ಯದರ್ಶಿ ಸನತ್ ಸಾಲ್ಯಾನ್ ಇದ್ದರು.
ಹಲಸುಮೇಳದಲ್ಲಿ ಖಾದಿ ಬಟ್ಟೆ, ಸೀರೆಗಳು, ಗೋ ಉತ್ಪನ್ನ, ಸಾವಯವ ಗೊಬ್ಬರ, ವಿವಿಧ ಬಗೆಯ ಗಿಡಗಳು, ದೇಸಿ ತರಕಾರಿ ಬೀಜ, ಆಯುರ್ವೇದಿಕ್ ಉತ್ಪನ್ನ, ಇನ್ನಿತರ ಸಾವಯವ ಉತ್ಪನ್ನಗಳ ಮಾರಾಟದ ವ್ಯವಸ್ಥೆಯಿತ್ತು. ಹಲಸಿನ ಖಾದ್ಯಗಳಾದ ಹೋಳಿಗೆ, ಹಲ್ವ, ಚಿಪ್ಸ್, ಮಾಂಬಳ, ಹಲಸಿನ ಗಟ್ಟಿ, ಐಸ್ಕ್ರೀಂ, ಮಿಲ್ಕ್ ಶೇಕ್, ಹಲಸಿನ ಹಣ್ಣಿನ ಕಬಾಬ್, ಗೋಬಿ, ಇನ್ನಿತರ ಖಾದ್ಯ ಸ್ಥಳದಲ್ಲೇ ತಯಾರಿಸಿಕೊಡಲಾಗುತ್ತಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.