ADVERTISEMENT

ಬ್ರಹ್ಮಾವರ: ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಸಂಘ

ಬಡ ಕುಟುಂಬಕ್ಕೆ ಆಸರೆಯಾದ ಕೋಡಿ ಕನ್ಯಾಣ ರಾಮಾಂಜನೇಯ ವಿವಿಧೋದ್ದೇಶ ಸಹಕಾರಿ ಸಂಘ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2024, 13:58 IST
Last Updated 16 ಸೆಪ್ಟೆಂಬರ್ 2024, 13:58 IST
ರಾಮಾಂಜನೇಯ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಬಡ ಕುಟುಂಬದ ಭವಾನಿ ಜಿ.ನಾಯಕ್ ಅವರಿಗೆ ನಿರ್ಮಿಸಿಕೊಟ್ಟ ಮನೆಯನ್ನು ಹಸ್ತಾಂತರಿಸಲಾಯಿತು
ರಾಮಾಂಜನೇಯ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಬಡ ಕುಟುಂಬದ ಭವಾನಿ ಜಿ.ನಾಯಕ್ ಅವರಿಗೆ ನಿರ್ಮಿಸಿಕೊಟ್ಟ ಮನೆಯನ್ನು ಹಸ್ತಾಂತರಿಸಲಾಯಿತು   

ಬ್ರಹ್ಮಾವರ: ಸಹಕಾರಿ ಕ್ಷೇತ್ರದಲ್ಲಿ ರಾಮಾಂಜನೇಯ ಸಹಕಾರಿ ಸಂಘ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ ಎಂದು ಬೆಂಗಳೂರಿನ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಮಂಜುನಾಥ ಎಸ್.ಕೆ. ಹೇಳಿದರು.

ಸಾಸ್ತಾನ ಬಳಿಯ ಕೋಡಿ ಕನ್ಯಾಣ ರಾಮಾಂಜನೇಯ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಬಡ ಕುಟುಂಬದ ಭವಾನಿ ಜಿ.ನಾಯಕ್ ಅವರಿಗೆ ನಿರ್ಮಿಸಕೊಟ್ಟ ಮನೆ ಹಸ್ತಾಂತರಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಸಹಕಾರಿ ರಂಗ ಸ್ಥಾಪಿಸಿ ಬಡವರ ಕಣ್ಣೀರು ಒರೆಸುವ ಕಾಯಕ ಶ್ರೇಷ್ಠವಾದುದು ಎಂದು ಶ್ಲಾಘಿಸಿದರು.

ಸಹಕಾರಿ ರಂಗ ವ್ಯವಹಾರಕ್ಕೆ ಸೀಮಿತಗೊಳ್ಳದೆ ಅಶಕ್ತರಿಗೆ ಮಿಡಿಯುತ್ತಿದೆ ಎಂದರೆ ಈ ಕ್ಷೇತ್ರ ಬದಲಾವಣೆಯ ಪರ್ವವನ್ನು ಕಾಣುತ್ತಿದೆ ಎಂದರ್ಥ. ಸಮತಾವಾದ ಚಿಂತನೆಯೊಂದಿಗೆ ಗ್ರಾಮೀಣ ಜನರ ಬವಣೆ ನೀಗುತ್ತಿದೆ. ದಶಮಾನೋತ್ಸವ ಸಂಭ್ರಮದಲ್ಲಿರುವ ಈ ಸಂಘ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.

ADVERTISEMENT

ಮನೆ ನಿರ್ಮಾಣಕ್ಕೆ ಸಹಕರಿಸಿದ ಪಂಚಾಯಿತಿ ಸದಸ್ಯ ಅಂತೋನಿ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಶಂಭು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು.

ಉಪಾಧ್ಯಕ್ಷ ಮಹಾಬಲ ಕುಂದರ್‌, ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ಅಧ್ಯಕ್ಷ ಅಂಪಾರು ಜಗನಾಥ ಶೆಟ್ಟಿ, ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್, ಧಾರ್ಮಿಕ ಮುಖಂಡ ಮಾಧವ ಉಪಾಧ್ಯ, ಕೋಡಿ ಗ್ರಾ.ಪಂ. ಅಧ್ಯಕ್ಷೆ ಗೀತಾ ಖಾರ್ವಿ, ಕೋಡಿ ಕನ್ಯಾಣ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಮೆಂಡನ್, ಪಿಡಿಒ ರವೀಂದ್ರ ರಾವ್, ಸದಸ್ಯ ಕೃಷ್ಣ ಪೂಜಾರಿ ಪಿ, ಬೈಂದೂರು ಕಾಮಾಕ್ಷಿ ಸೌಹಾರ್ದ ಸಹಕಾರಿ ಸಂಘದ ಸಿಇಒ ಶ್ರೀನಿವಾಸ, ಭಾರತ್ ವಿಕಾಸ್ ಸೌಹಾರ್ದ ಸಹಕಾರಿಯ ಸಿಇಒ ರಾಜು, ಹಂದಟ್ಟು ಕಾಮಧೇನು ಸಹಕಾರಿ ಸಂಘದ ಸಿಇಒ ಸತೀಶ ನಾಯ್ಕ, ಅಗ್ರಜ ಸೌಹಾರ್ದ ಸಹಕಾರಿ ಸಂಘದ ಸಿಇಒ ಗಣೇಶ ಕೋಟ್ಯಾನ್, ಗಂಗೊಳ್ಳಿ ಪಂಚಗಂಗಾವಳಿ ಸೌಹಾರ್ದ ಸಹಕಾರಿ ಸಂಘದ ಸಿಇಒ ಸುಬ್ರಹ್ಮಣ್ಯ, ಉಪ್ಪುಂದ ವರಲಕ್ಷ್ಮೀ ಸೌಹಾರ್ದ ಸಹಕಾರಿ ಸಂಘದ ಸಿಇಒ ಸುಧಾಕರ, ಸಾಸ್ತಾನ ಸನ್ನಿಧಿ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಸಿಇಒ ಸುದರ್ಶನ, ಮಣಿಪಾಲ ಸಾರಸ್ವತ ಸೌಹಾರ್ದ ಸಹಕಾರಿ ಸಂಘದ ಸಿಇಒ ಭುವನೇಶ ಪ್ರಭು, ಜಿಲ್ಲಾ ಸೌಹಾರ್ದ ಒಕ್ಕೂಟದ ಸಿಇಒ ಲೋಹಿತ್ ಸಾಲಿಯಾನ್, ಆತ್ಮಿಕ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ರಘುರಾಮ ಮರಕಾಲ ಇದ್ದರು. ರಾಮಾಂಜನೇಯ ಸೌಹಾರ್ದ ಸಹಕಾರಿ ಸಂಘದ ಸಿಇಒ ರಾಘವೇಂದ್ರ ಕರ್ಕೇರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.