ಕುಂದಾಪುರ: ಇಲ್ಲಿಗೆ ಸಮೀಪದ ಕುಂಭಾಶಿಯ ಪುರಾಣ ಪ್ರಸಿದ್ಧ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಮಂಗಳವಾರ ನಡೆದ ಅಂಗಾರಕ ಸಂಕಷ್ಟಹರ ಚತುರ್ಥಿ ಸಂಭ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.
ಉತ್ಸವದ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ಗಣಪತಿ ದೇವರಿಗೆ ಸಹಸ್ರ ನಾಳಿಕೇರ ಗಣಯಾಗ ನಡೆಯಿತು. ನಿರ್ಮೂಲ್ಯ ವಿಸರ್ಜನೆ ಪೂಜೆ, 1008 ತೆಂಗಿನಕಾಯಿ ಗಣಹೋಮದ ಪೂರ್ಣಾಹುತಿ, ಪರಿಚಾಮೃತ ಅಭಿಷೇಕ ಪೂರ್ವಕ ಉಪನಿಶತ್ ಕಲಶಾಭಿಷೇಕ, ಸತ್ಯಗಣಪತಿ ವೃತ ಸಹಿತ ಮಹಾಪೂಜೆ, ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿ ಮಹಾರಂಗ ಪೂಜೆಯೊಂದಿಗೆ ರಜತ ರಥೋತ್ಸವ ನಡೆಯಿತು.
ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಭಕ್ತರು ಸಾಗರೋಪದಿಯಲ್ಲಿ ಹರಿದು ಬಂದು ದೇವರ ದರ್ಶನ ಪಡೆದು ಪುನೀತರಾದರು. ವಿಶಾಲ ಯಕ್ಷ ಕಲಾ ಬಳಗ ನಂದಳಿಕೆ ಇವರಿಂದ ಶ್ರೀಕೃಷ್ಣ ಅಕ್ರೂರ ಯಕ್ಷಗಾನ ತಾಳಮದ್ದಲೆ, ಗೋಪಾಡಿ ಶ್ರೀಕಾಂತೇಶ್ವರ ಕಲಾಸಂಘ ಗೋಪಾಡಿ ಇವರಿಂದ ಕಲಾವೈವಿದ್ಯ ನಡೆದವು.
ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀರಮಣ ಉಪಾಧ್ಯಾಯ, ಮೊಕ್ತೇಸರರಾದ ಕೆ.ನಿರಂಜನ ಉಪಾಧ್ಯಾಯ, ಕೆ. ಪದ್ಮನಾಭ ಉಪಾಧ್ಯಾಯ, ಮಾಜಿ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ, ಪರ್ಯಾಯ ಅರ್ಚಕರಾದ ಕೃಷ್ಣಾನಂದ ಉಪಾಧ್ಯಾಯ ಮತ್ತು ಸಹೋದರರು, ವ್ಯವಸ್ಥಾಪಕ ನಟೇಶ್ ಕಾರಂತ್, ಅರ್ಚಕ ಮಂಡಳಿ ಸದಸ್ಯರು, ಸಿಬ್ಬಂದಿ, ಉಪಾಧ್ಯಾಯ ಕುಟುಂಬದ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.