ADVERTISEMENT

ಪಥ ಸಂಚಲನಕ್ಕೆ ಮೆರುಗು ನೀಡಿದ ಬ್ಯಾಂಡ್ ಸೆಟ್‌

ಕುಂದಾಪುರ ಗಾಂಧಿ ಮೈದಾನದಲ್ಲಿ ಗಣರಾಜ್ಯೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 26 ಜನವರಿ 2024, 12:51 IST
Last Updated 26 ಜನವರಿ 2024, 12:51 IST
ಕುಂದಾಪುರದ ಗಾಂಧಿಮೈದಾನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ವತಿಯಿಂದ ನಡೆದ ಗಣರಾಜ್ಯೋತ್ಸವದಲ್ಲಿ ಉಪವಿಭಾಗಾಧಿಕಾರಿ ರಶ್ಮಿ ಎಸ್‌.ಆರ್ ಧ್ವಜಾರೋಹಣ ನೇರವೇರಿಸಿ, ಗೌರವ ರಕ್ಷೆ ಸ್ವೀಕರಿಸಿದರು. ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ, ತಹಶೀಲ್ದಾರ್ ಎಚ್.ಎಸ್.ಶೋಭಾಲಕ್ಷ್ಮಿ ಇದ್ದರು
ಕುಂದಾಪುರದ ಗಾಂಧಿಮೈದಾನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ವತಿಯಿಂದ ನಡೆದ ಗಣರಾಜ್ಯೋತ್ಸವದಲ್ಲಿ ಉಪವಿಭಾಗಾಧಿಕಾರಿ ರಶ್ಮಿ ಎಸ್‌.ಆರ್ ಧ್ವಜಾರೋಹಣ ನೇರವೇರಿಸಿ, ಗೌರವ ರಕ್ಷೆ ಸ್ವೀಕರಿಸಿದರು. ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ, ತಹಶೀಲ್ದಾರ್ ಎಚ್.ಎಸ್.ಶೋಭಾಲಕ್ಷ್ಮಿ ಇದ್ದರು   

ಕುಂದಾಪುರ: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕಬೇಕು ಎನ್ನುವ ಉದ್ದೇಶದಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ವಿಶ್ವದಲ್ಲೇ ಅತ್ಯಂತ ದೊಡ್ಡ ಹಾಗೂ ಶ್ರೇಷ್ಠ ಸಂವಿಧಾನ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ ಎಂದು ಉಪವಿಭಾಗಾಧಿಕಾರಿ ರಶ್ಮಿ ಎಸ್‌.ಆರ್ ಅಭಿಪ್ರಾಯಪಟ್ಟರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ವತಿಯಿಂದ ನಡೆದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ, ಗೌರವ ರಕ್ಷೆ ಸ್ವೀಕರಿಸಿ ಅವರು ಮಾತನಾಡಿದರು.

ಸಂವಿಧಾನ ದೇಶದ ಜನರ ಜೀವನದ ಅವಿಭಾಜ್ಯ ಅಂಗವಾಗಿದ್ದು, ದೇಶದ ಹಾಗೂ ಜನರ ಪ್ರಗತಿಯೇ ಸಂವಿಧಾನದ ಮೂಲ ಆಶಯವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಮೂಲಕ ಸಂವಿಧಾನ ಆಶಯ ಪೂರೈಸಬೇಕು ಎಂದರು.

ADVERTISEMENT

ಕುಂದಾಪುರ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಬೆಳ್ಳಿಯಪ್ಪ ಕೆ.ಯು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ವಿ.ರಾವ್, ಪುರಸಭೆ ಮುಖ್ಯಾಧಿಕಾರಿ ಮಂಜುನಾಥ್, ಪೊಲೀಸ್ ನಿರೀಕ್ಷಕ ನಂದಕುಮಾರ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರೇಮಾನಂದ್, ಸಿಡಿಪಿಒ ಅನುರಾಧ, ತಾಲ್ಲೂಕು ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಕುಸುಮಾಕರ ಶೆಟ್ಟಿ, ಕೃಷಿ ಇಲಾಖೆಯ ಅಧಿಕಾರಿ ರೂಪಾ ಮಾಡ, ಸಮಾಜ ಕಲ್ಯಾಣ ಇಲಾಖೆಯ ರಾಘವೇಂದ್ರ ವರ್ಣೇಕರ್, ಮೀನುಗಾರಿಕೆ ಇಲಾಖೆಯ ಸುಮಲತಾ, ಪುರಸಭೆಯ ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಪುರಸಭಾ ಸದಸ್ಯರಾದ ದೇವಕಿ ಪಿ ಸಣ್ಣಯ್ಯ, ಸಂದೀಪ್ ಖಾರ್ವಿ, ಪ್ರಭಾಕರ ವಿ, ಸಂತೋಷ್‌ ಶೆಟ್ಟಿ, ಮಾಜಿ ಸದಸ್ಯ ಪ್ರಕಾಶ್ ಖಾರ್ವಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

ನಗರ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಪ್ರಸಾದ್ ಕುಮಾರ್ ಕಮಾಂಡ್ ನೀಡಿದರು. ವಿನಯ ಕೊರ್ಲಹಳ್ಳಿ ಪಥ ಸಂಚಲನದ ನೇತೃತ್ವದ ವಹಿಸಿದ್ದರು.

ಪಥ ಸಂಚಲನದಲ್ಲಿ ಪೊಲೀಸರ ತಂಡ, ಪುರಸಭೆಯ ಪೌರ ಕಾರ್ಮಿಕರ ತಂಡ, ಕುಂದಾಪುರದ ವಿ.ಕೆ.ಆರ್. ಆಚಾರ್ಯ ಆಂಗ್ಲ ಮಾಧ್ಯಮ ಶಾಲೆ, ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸಂತ ಜೋಸೆಫ್ ಪ್ರೌಢಶಾಲೆ, ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಗರ್ಲ್ಸ್ ಸ್ಕೂಲ್), ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಡೇರಹೋಬಳಿ, ಸಂತ ಮೇರಿಸ್ ಹಿರಿಯ ಪ್ರಾಥಮಿಕ ಶಾಲೆ, ಸರ್ಕಾರಿ ಬೋರ್ಡ್ ಹೈಸ್ಕೂಲ್, ವಡೇರ ಹೋಬಳಿ ಪ್ರೌಢಶಾಲೆ, ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ತಂಡಗಳು ಭಾಗವಹಿಸಿದ್ದವು.

ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಬ್ಯಾಂಡ್ ಸೆಟ್‌ ಪಥ ಸಂಚಲನಕ್ಕೆ ಮೆರುಗು ನೀಡಿತು. ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಮಿಕರ ಇಲಾಖೆಯಿಂದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡಲಾದ ಲ್ಯಾಪ್‌ಟಾಪ್‌ ಹಸ್ತಾಂತರಿಸಲಾಯಿತು. ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು.

ತಹಶೀಲ್ದಾರ್ ಎಚ್‌.ಎಸ್‌.ಶೋಭಾಲಕ್ಷ್ಮಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಶೋಭಾ ಎಸ್‌ ಶೆಟ್ಟಿ ವಂದಿಸಿದರು. ಪತ್ರಕರ್ತ ಚಂದ್ರ ಶೇಖರ್ ಬೀಜಾಡಿ ನಿರೂಪಿಸಿದರು.

ಕುಂದಾಪುರದ ಗಾಂಧಿಮೈದಾನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು
ಕುಂದಾಪುರದ ಗಾಂಧಿಮೈದಾನದಲ್ಲಿ ಶುಕ್ರವಾರ ತಾಲ್ಲೂಕು ಆಡಳಿತ ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು

ಸಾಧಕರಿಗೆ ಗೌರವ‌‌

ಕೃಷಿ ಇಲಾಖೆಯಿಂದ ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿ ಪಡೆದ ಕರುಣಾಕರ ಶೆಟ್ಟಿ ಕೆದೂರು ನಿತ್ಯಾನಂದ ಶೇರೆಗಾರ್ ಬೀಜಾಡಿ ಉಷಾ ಬಾಯರಿ ಕೆದೂರು ಇಂದಿರಾ ಶೆಡ್ತಿ ಹಳ್ನಾಡು ಲಕ್ಷ್ಮಿ ಕಾಳಾವರ ರುಕ್ಕು ಕಾಳಾವರ ಶ್ರೀನಿವಾಸ ಶಾನುಭಾಗ್ ಕುಂದಬಾರಂದಾಡಿ ಬಿ.ರತ್ನಾಕರ ಶೆಟ್ಟಿ ಉಳ್ಳೂರು-74 ನಾರಾಯಣ ಶೆಟ್ಟಿ ಹೇರೂರು ಬಚ್ಚು ದೇವಾಡಿಗ ಕಟ್‌ಬೆಲ್ತೂರು ಸತೀಶ ಶೇರಿಗಾರ್ ಕಂದಾವರ ಅವರನ್ನು ಗೌರವಿಸಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.