ADVERTISEMENT

ಸಮಸ್ಯೆಗಳ ಇತ್ಯರ್ಥಕ್ಕೆ ಸೂಚನೆ

ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಗಂಟಿಹೊಳೆ ಸಭೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 6:30 IST
Last Updated 10 ಜುಲೈ 2024, 6:30 IST
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿದರು
ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ ಅವರು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿದರು   

ಬೈಂದೂರು: ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಗುರುರಾಜ ಗಂಟಿಹೊಳೆ ಅವರು ಮಂಗಳವಾರ ಇಲ್ಲಿನ  ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒಗಳೊಂದಿಗೆ ಹಾಗೂ ಕಂದಾಯ, ಸರ್ವೆ, ಅರಣ್ಯ, ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಗುರುರಾಜ ಗಂಟಿಹೊಳೆ ಅವರು, ಗೋಳಿಹೊಳೆ, ಹೇರೂರು, ಕೊಲ್ಲೂರಿನಲ್ಲಿ ಗೋಮಾಳದ ಜಾಗ ಗುರುತಾಗಿದ್ದು, ಆದಷ್ಟು ಬೇಗ ನರೇಗಾ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ಆರಂಭಿಸುವಂತೆ ಹಾಗೂ ಉಳಿದಿರುವ ಗೋಮಾಳಗಳ ಸರ್ವೆ ಕಾರ್ಯವನ್ನು ಆದಷ್ಟು ಬೇಗ ಮುಗಿಸಿ, ಕಾಮಗಾರಿ ಆರಂಭಿಸಲು ಸೂಚನೆ ನೀಡಿದರು.

ಯಾವೆಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ಮಶಾನ ಇಲ್ಲ ಮತ್ತು ಸ್ಮಶಾನ ಜಾಗ ಗ್ರಾಮ ಪಂಚಾಯಿತಿ ಹೆಸರಲ್ಲಿ ಇಲ್ಲ ಎಂಬುದರ ಮಾಹಿತಿ ಪಡೆದುಕೊಂಡು, ಸ್ಮಶಾನ ಭೂಮಿಗಳನ್ನು ಇದುವರೆಗೂ ಗ್ರಾಮ ಪಂಚಾಯಿತಿ ಹೆಸರಿಗೆ ಪಹಣಿ ಮಾಡಿಸದೇ ಇದ್ದಲ್ಲಿ ಅಂತಹ ಗ್ರಾಮ ಪಂಚಾಯಿತಿ ಮಾಹಿತಿ  ಪಡೆದು ತಹಶೀಲ್ದಾರ್ ಅವರ ಗಮನಕ್ಕೆ ತಂದು ಪಹಣಿ ಮಾಡಿಸಬೇಕು ಮತ್ತು ಈ ಎಲ್ಲಾ ಮಾಹಿತಿಗಳನ್ನು ಕ್ರೋಢಿಕರಿಸಿ ಶಾಸಕರ ಕಚೇರಿಗೆ ಒದಗಿಸಬೇಕು ಎಂದು ತಿಳಿಸಿದರು.

ADVERTISEMENT

ನರೇಗಾ ಯೋಜನೆಯಡಿ ಸ್ಮಶಾನವನ್ನು ಅಭಿವೃದ್ಧಿ ಪಡಿಸಲು ಅವಕಾಶಗಳಿವೆಯೇ ಎಂಬುದನ್ನು ಅಧಿಕಾರಿಗಳು ತಿಳಿದುಕೊಂಡು ಕಾರ್ಯಪ್ರವೃತ್ತರಾಗಬೇಕು ಮತ್ತು ಈಗಾಗಲೇ ಇರುವ ಸ್ಮಶಾನಗಳಲ್ಲಿ ಮೂಲ ಸೌಕರ್ಯ ಸಮರ್ಪಕವಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಿ, ವ್ಯವಸ್ಥೆ ಇಲ್ಲದ ಕಡೆ ಸರಿಯಾದ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇತ್ತೀಚಿಗೆ ಕಂದಾಯ ಇಲಾಖೆಯಿಂದ ಲ್ಯಾಂಡ್ ಬೀಟ್ ತಂತ್ರಾಂಶದ ಮೂಲಕ ಗ್ರಾಮ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಕೆರೆಗಳ ಸಮೀಕ್ಷೆ ಪೂರ್ಣಗೊಂಡಿದ್ದು, ತಮ್ಮ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಕೆರೆಗಳ ಮಾಹಿತಿ ಲಭ್ಯವಿಲ್ಲದೇ ಇದ್ದಲ್ಲಿ ಪಂಚಾಯತ್ ಆಡಳಿತ ವಿಎಒಗಳಿಂದ ಪಡೆದು ಕೊಳ್ಳುವಂತೆ ಸೂಚಿಸಿದ ಅವರು, ಸಾಕಷ್ಟು ಸರ್ಕಾರಿ ಕೆರೆಗಳು ಸೂಕ್ತ ನಿರ್ವಹಣೆ ಇಲ್ಲದೇ ಸೊರಗಿವೆ. ಹೂಳು ತುಂಬಿಕೊಂಡಿವೆ ಹಾಗೂ ಒತ್ತುವರಿ ಆಗಿವೆ. ಈ ಹಿಂದೆ ಕೃಷಿ ಉದ್ದೇಶಕ್ಕೆ ಕೆರೆ ಹಾಗೂ ಮದಗಗಳ ನೀರು ಉಪಯೋಗಿಸಲಾಗುತ್ತಿತ್ತು. ಆದರೆ ಪ್ರಸ್ತುತ ಕೆರೆ ಹಾಗೂ ಕೆರೆಯಂಚಿನ ಪ್ರದೇಶಗಳು ಕಲುಷಿತಗೊಂಡಿವೆ. ಹೀಗಾಗಿ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ಸರ್ಕಾರಿ ಕೆರೆಗಳ ಅಭಿವೃದ್ಧಿಗೆ ಕ್ರಮವಹಿಸಬೇಕು ಎಂದರು.

ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತೀ ವರ್ಷ ಕನಿಷ್ಠ 2 ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಬೇಕು. ಈ ಉದ್ದೇಶಕ್ಕಾಗಿ ಸ್ಥಳೀಯ ನರೇಗಾ ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಬೇಕು. ನರೇಗಾ ಕೂಲಿ ಕಾರ್ಮಿಕರ ಲಭ್ಯತೆ ಇಲ್ಲದಿದ್ದರೆ ಸ್ಥಳೀಯ  ಸಂಘಟನೆಗಳ ಸಹಕಾರ ಅಥವಾ ಸಂಜೀವಿನಿ ಸಂಘದ ಸದ್ಯಸರ ಸಹಕಾರ ಕೋರುವಂತೆ ಸೂಚನೆ ನೀಡಿದರು.

ತಹಶೀಲ್ದಾರ್ ಪ್ರದೀಪ್ ಆರ್, ತಾಲ್ಲೂಕು ಪಂಚಾಯಿತಿ ಇ.ಒ. ಎನ್. ಭಾರತಿ, ತಾಲ್ಲೂಕು ಪಶುವೈದ್ಯಾಧಿಕಾರಿ ನಾಗರಾಜ ಮರವಂತೆ, ಕೊಲ್ಲೂರು ದೇವಳದ ಇ.ಒ. ಪ್ರಶಾಂತ ಶೆಟ್ಟಿ ಹಾಗೂ ಇಲಾಖಾಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಿಡಿಒಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.