ಉಡುಪಿ: ನಗರಸಭೆ ಕಚೇರಿಯಲ್ಲಿ ಕಸ ನಿರ್ವಹಣೆಯಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಸನ್ಮಾನಿಸುವ ಮೂಲಕ ವಿಶಿಷ್ಟವಾಗಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.
ಪೌರಾಯುಕ್ತ ರಾಯಪ್ಪ ಮಾತನಾಡಿ, ಮಹಿಳೆ ಎಲ್ಲಾ ಕ್ಷೇತ್ರಗಳಲ್ಲಿ ಪುರುಷರಿಗೆ ಸಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ಪ್ರತಿ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇದ್ದು, ಸ್ತ್ರೀಯರನ್ನು ಗೌರವಿಸುವುದು ಸಮಾಜದ ಕರ್ತವ್ಯ ಎಂದರು.
ನಗರಸಭೆಯ ಘನತ್ಯಾಜ್ಯ ನಿರ್ವಹಣೆಯಲ್ಲಿ ಪ್ರತಿದಿನ 1,000 ಕೆ.ಜಿ.ಗೂ ಅಧಿಕ ಕಸ ಪ್ರತ್ಯೇಕಿಸಿ ನಿರ್ವಹಣೆ ಮಾಡಿದ ಸ್ಪಂದನಾ ನಗರ ಸ್ತ್ರೀಶಕ್ತಿ ಗುಂಪಿನ ವನಜಾ, ಶ್ರೀಸಿದ್ದಿ ನಗರ ಸ್ತ್ರೀ ಶಕ್ತಿ ಗುಂಪಿನ ಚಂದಾ ಆನಂದ್ ಅಂಚನ್ ಹಾಗೂ ಕಾರುಣ್ಯ, ನಿರಂತರ ಉಳಿತಾಯ ಗುಂಪಿನ ಮೀನಾಕ್ಷಿ ಹಾಗೂ ತ್ಯಾಜ್ಯ ಸಂಗ್ರಹಣೆ ವಾಹನದ ಮಹಿಳಾ ಚಾಲಕಿ ಸ್ಮಿತಾ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭ ಪರಿಸರ ಎಂಜಿನಿಯರ್ ಸ್ನೇಹ ಕೆ.ಎಸ್, ಪ್ರಭಾರ ಆರೋಗ್ಯ ನಿರೀಕ್ಷಕ ಮನೋಹರ್, ಕಚೇರಿ ವ್ಯವಸ್ಥಾಪಕ ನಾಗರಾಜ ಕೆ, ಕಂದಾಯ ಅಧಿಕಾರಿ ಸಂತೋಷ್ ಎಸ್.ಬಿ, ಸಮುದಾಯ ಸಂಘಟನಾ ಅಧಿಕಾರಿ ನಾರಾಯಣ ಎಸ್.ಎಸ್, ಸುರೇಂದ್ರ, ಸಿಬ್ಬಂದಿ ಇದ್ದರು. ಕಂದಾಯ ವಿಭಾಗದ ಸುಧಾಕರ್ ಕೋಟ್ಯಾನ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.