ಪಡುಬಿದ್ರಿ: ನಂದಿಕೂರು ವಿಶೇಷ ಆರ್ಥಿಕ ವಲಯ ಬಳಿ ಸ್ಥಾಪನೆಯಾಗಿರುವ ಬಯೊ ಡೀಸೆಲ್ ತಾಳೆ ಎಣ್ಣೆ ತಯಾರಿಕಾ ಘಟಕದಿಂದ ಹೊರಸೂಸುವ ದುರ್ವಾಸನೆ ಬಗ್ಗೆ ಸಾರ್ವಜನಿಕ ದೂರಿನ ಹಿನ್ನೆಲೆ ತೊಂದರೆಗೆ ಒಳಗಾಗಿರುವ ಪ್ರದೇಶಗಳಿಗೆ ಪಲಿಮಾರು ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ಅಧ್ಯಕ್ಷೆ ಸೌಮ್ಯಲತಾ ಶೆಟ್ಟಿ, ಉಪಾಧ್ಯಕ್ಷ ರಾಯೇಶ್ವರ ಪೈ, ಸದಸ್ಯ ಸತೀಶ್ ದೇವಾಡಿಗ, ಪಿಡಿಒ ಶಶಿಧರ್ ಬಿ. ದುರ್ವಾಸನೆಯಿಂದ ತೊಂದರೆಗೆ ಒಳಗಾಗಿರುವ ಪರಿಸರದ ಅಂಗನವಾಡಿ, ಸಾರ್ವಜನಿಕರೊಂದಿಗೆ ಚರ್ಚಿಸಿದರು. ಈ ವೇಳೆ ಪರಿಸರದಲ್ಲಿ ಬರುತ್ತಿರುವ ದುರ್ವಾಸನೆ ಗಮನಿಸಿದರು.
ಸಾರ್ವಜನಿಕ ಅಹವಾಲು ಸ್ವೀಕರಿಸಿದ ಗ್ರಾ.ಪಂ. ಅಧ್ಯಕ್ಷರು, ಕೈಗಾರಿಕೆಯಿಂದ ಸ್ಥಳೀಯ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗುತ್ತಿದ್ದಲ್ಲಿ ಕಂಪನಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಮಸ್ಯೆ ಬಗ್ಗೆ ಚರ್ಚಿಸಲು ಪಂಚಾಯಿತಿ ವ್ಯಾಪ್ತಿಯ ಪ್ರಮುಖರ ಸಭೆಯನ್ನು ಜುಲೈ 5ರಂದು ಸಂಜೆ 4ಕ್ಕೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳುವುದಲ್ಲದೆ, ಅನಿವಾರ್ಯವಾದರೆ ಕಂಪನಿ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಅವರು ತಿಳಿಸಿದರು.
Cut-off box - ಪ್ರತಿಭಟನೆ ನಂದಿಕೂರಿನ ಬಯೊಡಿಸೇಲ್ ಘಟಕದಲ್ಲಿ ಮತ್ತೆ ದುರ್ವಾಸನೆ ಉಂಟಾಗಿದ್ದು ಸಾರ್ವಜನಿಕರು ಕಂಪನಿ ಗೇಟ್ಗೆ ಕಾರು ಅಡ್ಡ ಇಟ್ಟು ಪ್ರತಿಭಟನೆ ನಡೆಸಿದರು. ಮಂಗಳವಾರ ರಾತ್ರಿ ಮತ್ತೆ ದುರ್ವಾಸನೆ ಉಂಟಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿ ನಾಗೇಶ್ ರಾವ್ ಕಂಪನಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿ ಪರಿಸರ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟುಹಿಡಿದರು. ಪೊಲೀಸರು ಸ್ಥಳಕ್ಕೆ ಬಂದು ಸ್ಥಳೀಯರನ್ನು ಮನವೊಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.