ADVERTISEMENT

ಉಡುಪಿ ಪಾಲಿಗೆ ಗೃಹಲಕ್ಷ್ಮಿಯೂ ಇಲ್ಲ, ಉಸ್ತುವಾರಿ ಲಕ್ಷ್ಮಿಯೂ ಇಲ್ಲ: ದಿನೇಶ್ ಅಮೀನ್

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 14:19 IST
Last Updated 8 ಜುಲೈ 2024, 14:19 IST

ಉಡುಪಿ: ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಹಣ ಜಿಲ್ಲೆಯ ಫಲಾನುಭವಿಗಳಿಗೆ ಕೆಲವು ತಿಂಗಳುಗಳಿಂದ ಬಿಡುಗಡೆಯಾಗಿಲ್ಲ. ಈ ಇಲಾಖೆಯ ನೇತೃತ್ವ ವಹಿಸಿಕೊಂಡ ಜಿಲ್ಲಾ ಉಸ್ತುವಾರಿ ಸಚಿವೆ ಜಿಲ್ಲೆಯ ಅಭಿವೃದ್ಧಿಯನ್ನು ಸಂಪೂರ್ಣವಾಗಿ ಕಡೆಗಣಿಸುವ ಮೂಲಕ ಉಡುಪಿಯ ಜನರ ಪಾಲಿಗೆ ಗೃಹಲಕ್ಷ್ಮಿ ಭಾಗ್ಯವೂ ಇಲ್ಲ ಉಸ್ತುವಾರಿ ಲಕ್ಷ್ಮಿ ಭಾಗ್ಯವೂ ಇಲ್ಲ ಎಂಬಂತಾಗಿದೆ ಎಂದು ಬಿಜೆಪಿ ಉಡುಪಿ ನಗರ ಘಟಕ ಅಧ್ಯಕ್ಷ ದಿನೇಶ್ ಅಮೀನ್ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನೇತೃತ್ವದ ಸರ್ಕಾರ ಚುನಾವಣಾ ಪೂರ್ವದಲ್ಲಿ ಘೋಷಣೆ ಮಾಡಿದಂತೆ ಗೃಹಲಕ್ಷ್ಮಿ ಯೋಜನೆ ಆರಂಭಿಸಿದ್ದರೂ ಇದು ಜಿಲ್ಲೆಯ ಎಲ್ಲಾ ಅರ್ಹ ಮಹಿಳೆಯರಿಗೆ ತಲುಪಿಲ್ಲ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ್‌ ಅವರು ಜಿಲ್ಲೆಗೆ ಅತಿಥಿಯಂತೆ ಬಂದು ಅಧಿಕಾರಿಗಳೊಂದಿಗೆ ಸಭೆ ನಡೆಸಿದರೂ ಯಾವುದೇ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಸಾಕಷ್ಟು ಆಸ್ತಿ ಪಾಸ್ತಿ ನಷ್ಟವಾದರೂ ಸಚಿವೆ ಜಿಲ್ಲೆಗೆ ಬಂದು ಪರಿಶೀಲನೆ ಮಾಡಿ ಪರಿಹಾರ ವಿತರಣೆ ಮಾಡಿಲ್ಲ. ಕಡಲ್ಕೊರೆತ ಸಮಸ್ಯೆ, ಡೆಂಗಿ, ಮಲೇರಿಯ ಸಹಿತ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತದೊಂದಿಗೆ ಯಾವುದೇ ಸಭೆ ನಡೆಸಿಲ್ಲ ಎಂದಿದ್ದಾರೆ.

ADVERTISEMENT

ಉಡುಪಿ ಪರ್ಯಾಯ ಮಹೋತ್ಸವಕ್ಕೆ ₹10 ಕೋಟಿ, ಕಡಲ್ಕೊರೆತ ತಡೆಗೆ ₹5 ಕೋಟಿ ಅನುದಾನ ನೀಡುವ ಬಗ್ಗೆ ಘೋಷಿಸಿದ್ದ ಆಶ್ವಾಸನೆ ಇನ್ನೂ ಈಡೇರಿಲ್ಲ. ಉಡುಪಿಯ ಜನರು ಉಸ್ತುವಾರಿ ಸಚಿವೆ ಮೇಲಿನ ಭರವಸೆ ಕಳೆದುಕೊಂಡಿದ್ದು, ಇನ್ನಾದರೂ ಜಿಲ್ಲೆಯ ಜನರ ಸಮಸ್ಯೆ ಪರಿಹರಿಸಲು ಮುಂದಾಗಿ ಎಂದು ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.