ಹೆಬ್ರಿ (ಉಡುಪಿ): ಕೇರಳದಿಂದ ಬಾಡಿ ವಾರೆಂಟ್ ಮೇಲೆ ಕರೆತಂದಿರುವ ಶಂಕಿತ ನಕ್ಸಲ್ ಶ್ರೀಮತಿಯನ್ನು ಗುರುವಾರ ಪೊಲೀಸರು ಇಲ್ಲಿಯ ಕಬ್ಬಿನಾಲೆ ಪ್ರದೇಶಕ್ಕೆ ಕರೆತಂದು ಸ್ಥಳ ಮಹಜರು ಪ್ರಕ್ರಿಯೆ ನಡೆಸಿದರು.
ನಕ್ಸಲ್ ಮಾಹಿತಿದಾರ ಎಂಬ ಶಂಕೆಯ ಮೇಲೆ 2011ರ ನ.19ರಂದು ಹೆಬ್ರಿಯ ಕಬ್ಬಿನಾಲೆಯಲ್ಲಿ ಸದಾಶಿವ ಗೌಡ ಎಂಬುವರನ್ನು ನಕ್ಸಲರು ಅಪಹರಿಸಿ ಕೊಲೆ ಮಾಡಿದ್ದರು. ಈ ಪ್ರಕರಣ ಸಂಬಂಧ 2023ರ ನವೆಂಬರ್ನಲ್ಲಿ ಕೇರಳದ ಕಣ್ಣೂರಿನಲ್ಲಿ ಶ್ರೀಮತಿಯನ್ನು ಬಂಧಿಸಲಾಗಿತ್ತು.
ಸದಾಶಿವ ಗೌಡ ಅಪಹರಣ ಹಾಗೂ ಕೊಲೆ ಪ್ರಕರಣ ಸಂಬಂಧ ಇದೀಗ ಕಾರ್ಕಳ ಪೊಲೀಸರು ಕೇರಳದಿಂದ ಶ್ರೀಮತಿಯನ್ನು ಕರೆತಂದು ಸ್ಥಳ ಮಹಜರು ನಡೆಸಿದ್ದಾರೆ.
ಶ್ರೀಮತಿ ಅವರು ಶೃಂಗೇರಿ ತಾಲ್ಲೂಕಿನ ಬೆಳಗೋಡು ಕೊಡಿಗೆಯ ಪುಟ್ಟುಗೌಡ, ಗಿರಿಜಾ ದಂಪತಿ ಪುತ್ರಿ. ನಕ್ಸಲ್ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಆರೋಪವಿದ್ದು 2007ರಿಂದ ಆಕೆ ನಾಪತ್ತೆಯಾಗಿದ್ದರು.
ಕಾರ್ಕಳ ಡಿವೈಎಸ್ಪಿ ಅರವಿಂದ್ ಎನ್.ಕಲಗುಜ್ಜಿ ಮಾರ್ಗದರ್ಶನದಲ್ಲಿ ಸ್ಥಳ ಮಹಜರು ಪ್ರಕ್ರಿಯೆ ನಡೆದಿದ್ದು, ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.