ಕುಂದಾಪುರ: ಸಾಂಸ್ಕೃತಿಕ ಬೆಡಗು ಹೊಂದಿದ್ದ ಪ್ರಾಚೀನ ಕಲೆ ‘ಹೂವಿನಕೋಲು’ ನಶಿಸಿ ಹೋಗುತ್ತಿದ್ದ ಕಾಲದಲ್ಲಿ, ಮನೆ ಮನೆಗೆ ತೆರಳಿ ಕಲೆ ಉಳಿಯಲು ಶ್ರಮಿಸಿರುವ ತೆಕ್ಕಟ್ಟೆಯ ಯಶಸ್ವೀ ಕಲಾವೃಂದದ ಕಾರ್ಯ ಶ್ಲಾಘನೀಯ. ಸಂಸ್ಥೆಯ 25ನೇ ವರ್ಷಾಚರಣೆಯ ಸಂಭ್ರಮದಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿರುವುದು ಸ್ತುತ್ಯರ್ಹ ಎಂದು ಇಲ್ಲಿನ ಆದರ್ಶ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆದರ್ಶ ಹೆಬ್ಬಾರ್ ಹೇಳಿದರು.
ಡಾ.ಆದರ್ಶ ಹೆಬ್ಬಾರ್ ಅವರ ಮನೆಯಲ್ಲಿ ನಡೆದ ‘ಸಿನ್ಸ್ 1999 ಶ್ವೇತಯಾನ–75’ ಕಾರ್ಯಕ್ರಮದಡಿಯಲ್ಲಿ ಯಶಸ್ವೀ ಕಲಾವೃಂದ ಕೊಮೆ– ತೆಕ್ಕಟ್ಟೆ 13ನೇ ವರ್ಷದ ಹೂವಿನಕೋಲು ತಿರುಗಾಟದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜಾತಿ– ಧರ್ಮ, ಬಡವ– ಶ್ರೀಮಂತ ಎಂದು ಭೇದ ಮಾಡದೆ 495 ಮನೆಗಳಿಗೆ ತೆರಳಿ ಕಲೆ, ಸಂಸ್ಕೃತಿ ನೆನಪಿಸುವಂತೆ ಮಾಡಿರುವ ಸಂಸ್ಥೆಯ ಸಾಧನೆ ದೊಡ್ಡದು. ಜೀವನೋಪಾಯಕ್ಕಾಗಿ, ಬೆಳೆಯುವ ಕಲಾವಿದರಿಗೆ ಕಲಿಕೆ ನಿರಂತರವಾಗಿ ಇರಬೇಕು, ಮಕ್ಕಳಿಗೆ ಯಕ್ಷಗಾನದ ಅಭಿರುಚಿ, ಪೌರಾಣಿಕ ಕಥೆಯ ಸಾರ ಅಭ್ಯಾಸ ಮಾಡಲು ಹುಟ್ಟಿಕೊಂಡ ಕಲಾಪ್ರಕಾರವಾದ ಹೂವಿನಕೋಲನ್ನು ಪುನರುಜ್ಜೀವನಗೊಳಿಸುತ್ತಿರುವ ಸಂಸ್ಥೆ ಇನ್ನಷ್ಟು ಎತ್ತರಕ್ಕೇರಲಿ ಎಂದು ಹಾರೈಸಿದರು.
ಯಶಸ್ವಿ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ, ಉಪನ್ಯಾಸಕ ಶಂಕರನಾರಾಯಣ ಉಪಾಧ್ಯಾಯ, ಪಂಚಮಿ, ಅಭಿಯಾನದ ಕಲಾವಿದರು ಇದ್ದರು. ಹೆರಿಯ ಮಾಸ್ಟರ್ ನಿರೂಪಿಸಿದರು.
ಹೂವಿನಕೋಲು ತಿರುಗಾಟಕ್ಕಾಗಿ 4 ತಂಡಗಳನ್ನು ರಚಿಸಿಕೊಂಡು 495 ಮನೆಗಳಿಗೆ ತೆರಳಿ ಅಭಿಯಾನ ನಡೆಸಲಾಗಿತ್ತು. ಅಭಿಯಾನದ ಸಮಾರೋಪದ ಅಂಗವಾಗಿ ಡಾ.ಆದರ್ಶ ಹೆಬ್ಬಾರ್ ಮನೆಯಲ್ಲಿ ‘ಸುಧನ್ವಾರ್ಜುನ’, ‘ಹನುಮ– ಲಂಕಿಣಿ’ ಭಾಗದ ಪ್ರದರ್ಶನ ನಡೆಸಲಾಗಿತ್ತು. ಗಣಪತಿ ಭಟ್ ನಿಟ್ಟೂರು, ಕೃಷ್ಣ ಗಿಳಿಯಾರು, ವಿಶ್ವನಾಥ ಮಾಸ್ಟರ್, ಗಣೇಶ್ ಕೊಮೆ, ಜನಾರ್ದನ ಹಂದೆ, ಅಶೋಕ್ ಬಸ್ರೂರು, ಪ್ರಶಾಂತ್ ಆಚಾರ್ ಕೆಳಕಳಿ, ರಾಜೇಶ್ ಕೋಡಿ, ಪ್ರಶಾಂತ್ ಪಡುಕೆರೆ, ಹೆರಿಯ ಮಾಸ್ಟರ್, ವೆಂಕಟೇಶ ವೈದ್ಯ ತಂಡಗಳ ಜವಾಬ್ದಾರಿ ವಹಿಸಿದ್ದರು. ಹರ್ಷಿತಾ, ಆರಬಿ ಹೆಗಡೆ, ಪರಿಣಿತ ವೈದ್ಯ, ಪವನ್, ಕಿಶನ್, ಪೂರ್ವಿ, ಪ್ರಣಮ್ಯ, ರಚಿತ್, ಸಂಕೇತ್, ಆರಬಿ ಸಾಮಗ, ತ್ರಿಷಾ, ರಾಹುಲ್ ಅಮೀನ್, ರಾಹುಲ್ ಕುಂದರ್, ಪ್ರಾಚಾರ್ಯ ದೇವದಾಸ್ ರಾವ್ ಕೂಡ್ಲಿ ಅಭಿಯಾನದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.