ಶಿರ್ವ: ಕಾಪು ತಾಲ್ಲೂಕಿನ ಶಿರ್ವ ಪೇಟೆ ಸಮೀಪ ವ್ಯಕ್ತಿಯೊಬ್ಬ ನಾಯಿಯನ್ನು ದ್ವಿಚಕ್ರ ವಾಹನದ ಹಿಂಬದಿಗೆ ಸರಪಳಿಯಲ್ಲಿ ಬಿಗಿದು ಎಳೆದೊಯ್ದ ಘಟನೆ ಶನಿವಾರ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿದೆ.
ಮಲ್ಲಾರು ಕೊಂಬುಗುಡ್ಡೆಯ ನಿವಾಸಿ ಅಬ್ದುಲ್ ಖಾದರ್ ಈ ಕೃತ್ಯ ಎಸಗಿದ್ದು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾದ ನಂತರ ಪ್ರಾಣಿ ದಯಾಸಂಘದವರು ಪೊಲೀಸರಿಗೆ ದೂರು ನೀಡಿದ್ದಾರೆ. ಸದಸ್ಯೆ ಮಂಜುಳಾ ಕರ್ಕೇರ ಅವರು ಅಬ್ದುಲ್ ಖಾದರ್ ವಿರುದ್ಧ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸರಪಳಿಯ ಒಂದು ತುದಿಯನ್ನು ವಾಹನಕ್ಕೆ, ಇನ್ನೊಂದು ತುದಿಯನ್ನು ನಾಯಿಯ ಕುತ್ತಿಗೆಗೆ ಕಟ್ಟಿ ಶಿರ್ವ ಪಂಚಾಯಿತಿ ಕಚೇರಿ ಎದುರಿನ ರಸ್ತೆಯಲ್ಲಿ ಅಬ್ದುಲ್ ಖಾದರ್ ವಾಹನ ಓಡಿಸಿದ್ದಾರೆ. ಸೇಂಟ್ ಮೇರಿಸ್ ಜಂಕ್ಷನ್ ಕಡೆಯಿಂದ ಮಂಚಕಲ್ ಪೇಟೆ ಕಡೆಗೆ ಹೋಗುತ್ತಿರುವುದು ವಿಡಿಯೊದಲ್ಲಿ ದಾಖಲಾಗಿದೆ.
ಇದು ಹಿಂಸಾತ್ಮಕ ಕೃತ್ಯವಾಗಿದ್ದು ಅಮಾನವೀಯವಾಗಿ ವರ್ತಿಸಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮಂಜುಳಾ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.