ADVERTISEMENT

ಕುಂದಾಪುರ: ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ರುಂಡವಿಲ್ಲದ ಸ್ಥಿತಿಯಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2024, 5:11 IST
Last Updated 23 ಸೆಪ್ಟೆಂಬರ್ 2024, 5:11 IST
ಕರುಣಾಕರ ಶೆಟ್ಟಿ
ಕರುಣಾಕರ ಶೆಟ್ಟಿ   

ಕುಂದಾಪುರ: ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯ ವ್ಯಕ್ತಿಯೊಬ್ಬರ ಶವ, ರುಂಡವಿಲ್ಲದ ಸ್ಥಿತಿಯಲ್ಲಿ ಶನಿವಾರ ಗುಜ್ಜಾಡಿ ಗ್ರಾಮದ ಕಳಿಹಿತ್ಲು ಎಂಬಲ್ಲಿನ ಪಂಚಗಂಗಾವಳಿ ನದಿ ತೀರದಲ್ಲಿ ಪತ್ತೆಯಾಗಿದೆ.

ನದಿಯಲ್ಲಿ ಪತ್ತೆಯಾಗಿರುವ ವ್ಯಕ್ತಿಯನ್ನು ಗುಡ್ಡಮ್ಮಾಡಿಯ ಕರುಣಾಕರ ಶೆಟ್ಟಿ(72) ಎಂದು ಗುರುತಿಸಲಾಗಿದೆ.

ಕೆಂಚನೂರು ಗ್ರಾಮದ ಹೆರ್ಜಾಡಿಯ ಪತ್ನಿಯ ತವರು ಮನೆಯಲ್ಲಿ ವಾಸವಾಗಿದ್ದ ಕರುಣಾಕರ ಶೆಟ್ಟಿಯವರು, ಸೆ. 19ರಂದು ಗುಡ್ಡಮ್ಮಾಡಿಯ ತಮ್ಮ ಮನೆಗೆ ಹೋಗಿ ಬರುವುದಾಗಿ ಮಗಳಿಗೆ ಹೇಳಿ ಹೋಗಿದ್ದರು. ಗುರುವಾರ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದರು. ಮನೆಯವರು ಬೆಳಿಗ್ಗೆ ಎದ್ದು ನೋಡುವಾಗ ಅವರು ಮನೆಯಲ್ಲಿ ಇರಲಿಲ್ಲ.

ADVERTISEMENT

ಹುಡುಕಾಟ ನಡೆಸಿದ ಕುಟುಂಬಿಕರು ಹಾಗೂ ಸ್ಥಳೀಯರಿಗೆ ಬಂಟ್ವಾಡಿ ಗ್ರಾಮದ ಸೌಪರ್ಣಿಕ ನದಿಯ ಸೇತುವೆ ಮೇಲ್ಭಾಗದಲ್ಲಿ ಅವರ ಚಪ್ಪಲಿ ಹಾಗೂ ಟಾರ್ಚ್ ಕಾಣ ಸಿಕ್ಕಿತ್ತು ಹಾಗೂ ಸೇತುವೆಯಿಂದ ನದಿಯ ನೀರಿಗೆ ನೈಲಾನ್ ಹಗ್ಗವೊಂದನ್ನು ಇಳಿಬಿಡಲಾಗಿತ್ತು. ಇದನ್ನು ಗಮನಿಸಿದ್ದ ಮನೆಯವರು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು.

ಪತ್ತೆಯಾಗಿರುವ ವಸ್ತು ಹಾಗೂ ಹಗ್ಗದ ಕಾರಣದಿಂದ ಅವರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆಯಲ್ಲಿ ಶುಕ್ರವಾರ ಹಾಗೂ ಶನಿವಾರ ನದಿಯಲ್ಲಿ ತೀವ್ರವಾದ ಹುಡುಕಾಟ ನಡೆಸಲಾಗಿತ್ತು.

ಕಳಿಹಿತ್ಲುವಿನಲ್ಲಿ ಶವ ಪತ್ತೆ: ಗುಜ್ಜಾಡಿ ಗ್ರಾಮದ ಕಳಿಹಿತ್ಲು ಎಂಬಲ್ಲಿ ಶನಿವಾರ ರುಂಡವಿಲ್ಲದ ಸ್ಥಿತಿಯಲ್ಲಿ ಕರುಣಾಕರ ಶೆಟ್ಟಿಯವರ ಅವರ ಶವ ಪತ್ತೆಯಾಗಿದೆ. ಶವದ ರುಂಡ ಹಾಗೂ ಮುಂಡ ಬೇರೆ ಬೇರೆಯಾಗಿ ದೊರಕಿರುವುದರಿಂದ ಸಾವಿನಲ್ಲಿ ಸಂಶಯವಿರುವುದಾಗಿ ನಾರಾಯಣ ಶೆಟ್ಟಿ ಎನ್ನುವವರು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎತ್ತರದ ಸೇತುವೆಯ ಮೇಲಿನಿಂದ ಕುತ್ತಿಗೆಗೆ ಹಗ್ಗವನ್ನು ಬಿಗಿದು ಜಿಗಿದಿರುವುದರಿಂದಾಗಿ ರುಂಡ ತುಂಡಾಗಿರಬಹುದು ಎನ್ನುವ ಜಿಜ್ಞಾಸೆಗಳ ನಡುವೆ, ಕುಟುಂಬಿಕರು ಸಾವಿನಲ್ಲಿ ಅನುಮಾನವನ್ನು ವ್ಯಕ್ತಪಡಿಸಿರುವುದರಿಂದ, ಪೊಲೀಸರು ಹೆಚ್ಚಿನ ತನಿಖೆಗಾಗಿ ಮೃತದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಘಟನಾ ಸ್ಥಳಕ್ಕೆ ಕುಂದಾಪುರ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಕೆ.ಯು.ಬೆಳ್ಳಿಯಪ್ಪ ಹಾಗೂ ಗಂಗೊಳ್ಳಿ ಕಾನೂನು ಸುವ್ಯವಸ್ಥೆ ವಿಭಾಗದ ಎಸ್‌.ಐ ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಧಿ ವಿಜ್ಞಾನ ವಿಭಾಗದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ತನಿಖೆ ಮುಂದುವರೆದಿದೆ.

ಕಳೆದ ಕೆಲ ವರ್ಷಗಳ ಹಿಂದೆ ಮುಂಬೈ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಉದ್ಯೋಗ ಮಾಡುತ್ತಿದ್ದ ಕರುಣಾಕರ ಶೆಟ್ಟಿಯವರು, 5-6 ತಿಂಗಳ ಹಿಂದಷ್ಟೇ ಊರಿಗೆ ಮರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಕುಂದಾಪುರ ಸಮೀಪದ ಗುಜ್ಜಾಡಿ ಗ್ರಾಮದ ಕಳಿಹಿತ್ಲು ಎಂಬಲ್ಲಿ ಕರುಣಾಕರ ಶೆಟ್ಟಿಯವರ ದೇಹದ ಭಾಗಗಳು ಪತ್ತೆಯಾದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಂದಾಪುರ ಸಮೀಪದ ಗುಜ್ಜಾಡಿ ಗ್ರಾಮದ ಕಳಿಹಿತ್ಲು ಎಂಬಲ್ಲಿ ಗಂಗೊಳ್ಳಿ ಪೊಲೀಸ್ ಠಾಣೆಯ ಎಸ್‌.ಐ ಹರೀಶ್ ಆರ್ ನಾಯಕ್ ಹಾಗೂ ಸಿಬ್ಬಂದಿಗಳು ಸ್ಥಳೀಯರಿಂದ ಪ್ರಾಥಮಿಕ ಮಾಹಿತಿ ಪಡೆದುಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.