ADVERTISEMENT

ಕಳ್ಳತನಕ್ಕೆ ಯತ್ನಿಸುವಾಗ ಸೆರೆ

ಸೈನ್ ಇನ್ ಸೆಕ್ಯೂರಿಟಿ ಕಾಳಜಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 5:05 IST
Last Updated 23 ಜೂನ್ 2024, 5:05 IST
ಪ್ರಕಾಶ್ ಬಾಬು
ಪ್ರಕಾಶ್ ಬಾಬು   

ಕುಂದಾಪುರ: ಸಿ.ಸಿ.ಟಿ.ವಿ. ಕ್ಯಾಮೆರಾ ಮಾನಿಟರಿಂಗ್‌ ತಂಡದ ಸಮಯ ಪ್ರಜ್ಞೆಯಿಂದಾಗಿ ಸೊಸೈಟಿಯೊಂದರ ಕಿಟಕಿಯ‌ ಸರಳು‌ ಮುರಿದು ಒಳನುಗ್ಗಿದ ಕಳ್ಳನನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿಯುವಲ್ಲಿ ಗಂಗೊಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆರೋಪಿ ಕೇರಳದ ಕೊಲ್ಲಂ ಜಿಲ್ಲೆಯ ಪ್ರಕಾಶ್ ಬಾಬು (44) ಎಂದು ವಿಚಾರಣೆ ವೇಳೆ ತಿಳಿದುಬಂದಿದೆ‌. ಶುಕ್ರವಾರ ತಡರಾತ್ರಿ 1:44ರ ಸುಮಾರಿಗೆ ಮುಳ್ಳಿಕಟ್ಟೆಯಲ್ಲಿನ ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ‌ ಸಂಘದ ಹೊಸಾಡು ಶಾಖಾ ಕಟ್ಟಡದ ಕಿಟಕಿಯ ಸರಳು ಮುರಿದು ಒಳ ಪ್ರವೇಶಿಸಿದ ಪ್ರಕಾಶ್ ಬಾಬು ಸೊಸೈಟಿಯಲ್ಲಿ ಸಿಬ್ಬಂದಿ ಕುಳಿತುಕೊಳ್ಳುವ ಮೇಜಿನ ಡ್ರಾವರ್ ಇನ್ನಿತರ ಕಡೆಗಳಲ್ಲಿ ತಡಕಾಡುತ್ತಿದ್ದ ದೃಶ್ಯ ಸಿ.ಸಿ.ಟಿ.ವಿ.ಕ್ಯಾಮೆರಾದಲ್ಲಿ ಸೆರೆಯಾಗಿದೆ. ಎಚ್ಚೆತ್ತುಕೊಂಡ ಸೈನ್ ಇನ್‌ ಸೆಕ್ಯೂರಿಟಿಯ ಲೈವ್ ಮಾನಿಟರಿಂಗ್ ಸಿಬ್ಬಂದಿ ಬೀಟ್ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಗಂಗೊಳ್ಳಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪಿಎಸ್ಐ ಬಸವರಾಜ್ ಹಾಗೂ ಸಿಬ್ಬಂದಿ 10 ನಿಮಿಷದೊಳಗೆ ಸ್ಥಳಕ್ಕೆ ತಲುಪಿ ಕಳ್ಳನನ್ನು ಸೆರೆ ಹಿಡಿದಿದ್ದಾರೆ.

ಕಮಲಶಿಲೆ ಗೋ ಕಳ್ಳರ ಬಂಧನ: ಕಮಲಶಿಲೆಯ‌ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನ ಗೋ ಶಾಲೆಗೆ ನುಗ್ಗಿದ್ದ ಅಪರಿಚಿತ ಕಳ್ಳರ ದನ‌ ಕದಿಯುವ ಪ್ರಯತ್ನ ಸೈನ್ ಇನ್ ಸೆಕ್ಯೂರಿಟಿ ತಂಡ ಸಕಾಲಿಕ ಎಚ್ಚರಿಕೆಯಿಂದ ವಿಫಲವಾಗಿರುವ ಕುರಿತು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ADVERTISEMENT

ಸಿ.ಸಿ.ಟಿ.ವಿ. ಕ್ಯಾಮೆರಾ ದೃಶ್ಯಾವಳಿಗಳ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ ಶಂಕರನಾರಾಯಣ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಬಜ್ಪೆ ಮೂಲದ ಫೈಸಲ್, ವಾಜೀದ್ ಎನ್ನುವವರನ್ನು ಬಂಧಿಸಿದ್ದಾರೆ.

ಎಸ್.ಪಿ ಡಾ.ಅರುಣ್ ಕೆ., ಹೆಚ್ಚುವರಿ ಎಸ್.ಪಿ ಎಸ್.ಟಿ. ಸಿದ್ದಲಿಂಗಪ್ಪ , ಡಿವೈಎಸ್ಪಿ ಕೆ.ಯು.ಬೆಳ್ಳಿಯಪ್ಪ, ಸಿಪಿಐ ಜಯರಾಂ ಗೌಡ ಅವರ ಮಾರ್ಗದರ್ಶನದಲ್ಲಿ ಉಪ ನಿರೀಕ್ಷಕರಾದ ನಾಸಿರ್ ಹುಸೇನ್ ಹಾಗೂ ಶಂಭುಲಿಂಗಯ್ಯ ಎಂ. ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೊರ್ವ ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ.

ಕುಂದಾಪುರ ಸಮೀಪದ ಮುಳ್ಳಿಕಟ್ಟೆಯಲ್ಲಿನ ಸೊಸೈಟಿಯಲ್ಲಿ ಶುಕ್ರವಾರ ರಾತ್ರಿ ನಡೆದ ಕಳ್ಳತನ ಪ್ರಯತ್ನ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.