ಉಡುಪಿ: ಸಂತೆಕಟ್ಟೆ ಅಂಡರ್ ಪಾಸ್ ರಸ್ತೆ ಕಾಮಗಾರಿಯಿಂದ ಜನರು ಬಸವಳಿದಿರುವ ನಡುವೆಯೇ ರಸ್ತೆ ದುರವಸ್ಥೆ ಕುರಿತ ತುಳು ವಿಡಿಯೊ ಹಾಡು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದೆ.
ಗಾಯಕರಾಗಿರುವ ಮಣಿಪಾಲದ ಮದನ್ ಅವರು ರಚಿಸಿ, ರಾಗ ಸಂಯೋಜಿಸಿ, ಹಾಡಿರುವ ಹಾಡು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿಯು ಅಮೆಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿ ದಿನನಿತ್ಯ ವಾಹನ ದಟ್ಟಣೆಯಿಂದ ಜನರು ತೊಂದರೆ ಅನುಭವಿಸುವಂತಾಗಿದೆ.
ರಸ್ತೆ ಹೊಂಡದಿಂದ ಜನರು ದಿನಲೂ ಸಮಸ್ಯೆ ಅನುಭವಿಸುತ್ತಿರುವುದನ್ನು ಈ ಹಾಡಿನ ಮೂಲಕ ಕಟ್ಟಿಕೊಡಲಾಗಿದೆ.
ರಸ್ತೆ ಹೊಂಡದಿಂದ ಜಾರಿಬೀಳುತ್ತಿರುವ ದ್ವಿಚಕ್ರ ಸವಾರರ ಬವಣೆ, ಶಾಲಾ ವಾಹನಗಳ ಚಾಲಕರ ಕಷ್ಟ, ನಡೆದು ಹೋಗುವವರಿಗೆ ಕೆಸರಿನ ಸಿಂಚನವಾಗುತ್ತಿರುವ ವಿಚಾರಗಳು ಈ ಹಾಡಿನಲ್ಲಿದೆ.
ಈ ಹಿಂದೆ ಕಟಪಾಡಿ–ಶಿರ್ವ ರಸ್ತೆ ಅವ್ಯವಸ್ಥೆಯ ಬಗ್ಗೆ ಮದನ್ ಅವರು ಹಾಡು ರಚಿಸಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು.
ಕಟಪಾಡಿ–ಶಿರ್ವ ರಸ್ತೆಯ ಬಗ್ಗೆ ಹಾಡು ಮಾಡಿದ ಬಳಿಕ ಆ ರಸ್ತೆ ತಾತ್ಕಾಲಿಕವಾಗಿ ದುರಸ್ತಿಗೊಂಡಿತು. ಕುಂದಾಪುರಕ್ಕೆ ಹೋಗುವಾಗ ಸಂತೆಕಟ್ಟೆ ಅಂಡರ್ಪಾಸ್ ಕಾಮಗಾರಿ ನಡೆಯುತ್ತಿರುವ ಸ್ಥಳದ ರಸ್ತೆಯ ದುರವಸ್ಥೆಯನ್ನು ಕಣ್ಣಾರೆ ಕಂಡು ಈ ಹಾಡನ್ನು ರಚಿಸಿದ್ದೇನೆ ಎನ್ನುತ್ತಾರೆ ಮದನ್ ಮಣಿಪಾಲ.
ರಸ್ತೆಗಳ ದುರವಸ್ಥೆಯಿಂದ ಜನರಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿಯ ರೂಪದಲ್ಲಿ ಈ ವಿಡಿಯೊ ಹಾಡನ್ನು ಮಾಡಿದ್ದೇನೆಮದನ್ ಮಣಿಪಾಲ ಗಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.