ADVERTISEMENT

ಬ್ರಹ್ಮಾವರ: ಮಹಿಳೆಯರಿಂದ ಸಾಂಪ್ರದಾಯಿಕ ಭತ್ತ ನಾಟಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2024, 14:12 IST
Last Updated 8 ಜುಲೈ 2024, 14:12 IST
ಕೋಟತಟ್ಟು ಗ್ರಾಮದ ಕೃಷಿಕ ಶಿವಮೂರ್ತಿ ಉಪಾಧ್ಯ ಅವರ ಗದ್ದೆಯಲ್ಲಿ ಸಾಂಪ್ರದಾಯಿಕ ನಾಟಿ ಕಾರ್ಯ ನಡೆಯಿತು
ಕೋಟತಟ್ಟು ಗ್ರಾಮದ ಕೃಷಿಕ ಶಿವಮೂರ್ತಿ ಉಪಾಧ್ಯ ಅವರ ಗದ್ದೆಯಲ್ಲಿ ಸಾಂಪ್ರದಾಯಿಕ ನಾಟಿ ಕಾರ್ಯ ನಡೆಯಿತು   

ಬ್ರಹ್ಮಾವರ: ಕರಾವಳಿ ಜಿಲ್ಲೆಗಳಲ್ಲಿ ಮರೆಯಾಗುತ್ತಿರುವ ಸಾಂಪ್ರದಾಯಿಕ ಭತ್ತ ನಾಟಿ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಕೋಟತಟ್ಟು ಗ್ರಾಮದ ಕೃಷಿಕ ಶಿವಮೂರ್ತಿ ಉಪಾಧ್ಯ ಅವರ ಗದ್ದೆಯಲ್ಲಿ ನಡೆಯಿತು. 30ಕ್ಕೂ ಹೆಚ್ಚು ಮಹಿಳೆಯರು ನಾಟಿ ಕಾರ್ಯದಲ್ಲಿ ಪಾಲ್ಗೊಂಡರು.

ಕೋಟದ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸುಪ್ರಭಾ ಚಾಲನೆ ನೀಡಿ, ಆಧುನಿಕತೆಯ ನಡುವೆ ಮರೆಯಾಗುತ್ತಿರುದ ಸಾಂಪ್ರದಾಯಿಕ ನಾಟಿ ಕಾರ್ಯದ ಮಹತ್ವವನ್ನು ಸಂಘ ಸಂಸ್ಥೆಗಳ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಿರುವ ಪಂಚವರ್ಣ ಮಹಿಳಾ ಮಂಡಲದ ಕಾರ್ಯವನ್ನು ಶ್ಲಾಘಿಸಿದರು.

ಕೋಟದ ರೈತಧ್ವನಿ ಸಂಘದ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ ಮಾತನಾಡಿ, ಹಲವು ದಶಕಗಳಿಂದ ಕೋಟತಟ್ಟು ಪರಿಸರದಲ್ಲಿ ಸಾಂಪ್ರದಾಯಿಕ ಕೃಷಿ ಪದ್ಧತಿ ಮಾಡುತ್ತಿರುವ ಶಿವಮೂರ್ತಿ ಉಪಾಧ್ಯ ಎಲ್ಲರಿಗೂ ಮಾದರಿ ಎಂದರು.

ADVERTISEMENT

ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೋಟತಟ್ಟು ಗ್ರಾ.ಪಂ. ಸದಸ್ಯರಾದ ರವೀಂದ್ರ ತಿಂಗಳಾಯ, ವಿದ್ಯಾ ಸಂದೇಶ ಸಾಲಿಯಾನ್, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಜಿಲ್ಲಾ ಸಂಯೋಜಕ ರವೀಂದ್ರ ಮೊಗವೀರ, ಪಂಚವರ್ಣ ಯುವಕ ಮಂಡಲದ ಸಂಚಾಲಕ ಅಮೃತ್ ಜೋಗಿ, ಮಹಿಳಾ ಮಂಡದ ಗೌರವಾಧ್ಯಕ್ಷೆ ಕುಸುಮಾ ದೇವಾಡಿಗ, ಸ್ಥಾಪಕಾಧ್ಯಕ್ಷ ಸುರೇಶ ಗಾಣಿಗ ಇದ್ದರು.

ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಸಂಚಾಲಕಿ ಸುಜಾತ ಎಂ. ಬಾಯರಿ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ವಸಂತಿ ಹಂದಟ್ಟು ವಂದಿಸಿದರು. ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಕಾರ್ಯಕ್ರಮ ಸಂಯೋಜಿಸಿದರು. ಕಾರ್ಯದರ್ಶಿ ಸುಧೀಂದ್ರ ಜೋಗಿ, ಶಶಿಧರ ತಿಂಗಳಾಯ ಸಹಕರಿಸಿದರು.

ಗಮನ ಸೆಳೆದ ನಾಟಿ
ಕಾರ್ಯಕ್ರಮಕ್ಕೆ ಬಂದ ಗಣ್ಯರಿಗೆ ಭತ್ತದ ಅಗೆ ನೀಡಿ ಸ್ವಾಗತಿಸಿದ್ದು ವಿಶೇಷವಾದರೆ ಪ್ರಗತಿಪರ ಕೃಷಿಕ ಜಯರಾಮ ಶೆಟ್ಟಿ ಒಳಲ್ ಕರೆಯುವ ಮೂಲಕ ನಾಟಿ ಕಾರ್ಯಕ್ಕೆ ವೇಗ ನೀಡಿದರು. ಸ್ಥಳೀಯ ಮಹಿಳಾ ಕೂಲಿಯಾಳುಗಳು ಪರಂಪರೆಯ ಹಿಂದಿನ ಕೃಷಿ ಹಾಡುಗಳನ್ನು ಗದ್ದೆಯಲ್ಲಿ ಹಾಡಿ ಹಿಂದಿನ ಹಾಡುಗಳಿಗೆ ಮರುಜೀವ ನೀಡಿದರು. ಕಾರ್ಯಕ್ರಮಕ್ಕೆ ಕೋಟದ ಪಂಚವರ್ಣ ಮಹಿಳಾ ಮಂಡಲ ನೇತೃತ್ವ ಪಂಚವರ್ಣ ಯುವಕ ಮಂಡಲದ ಮಾರ್ಗದರ್ಶನದಲ್ಲಿ ಕೋಟದ ರೈತ ಸಂಪರ್ಕ ಕೇಂದ್ರದ ಸಹಯೋಗ ನೀಡಿದ್ದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.