ಯಲ್ಲಾಪುರ: ತಾಲ್ಲೂಕಿನ ಗಡಿ ಭಾಗವಾದ ಡೋಂಗ್ರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋನಾಳದಲ್ಲಿ ಉರಗ ತಜ್ಞ ಸೂರಜ್ ಶೆಟ್ಟಿ ಅರಬೈಲ್ ಶನಿವಾರ ಸಂಜೆ 10 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸೆರೆ ಹಿಡಿದರು.
ಕೋನಾಳದ ಪ್ರಶಾಂತ ಭಟ್ಟ ಎಂಬುವವರ ಮನೆಯ ಕೊಟ್ಟಿಗೆಯಲ್ಲಿ ಕಾಳಿಂಗ ಸರ್ಪ ಕಾಣಿಸಿಕೊಂಡಿತು. ಸುಮಾರು 10 ಅಡಿಯಷ್ಟು ಉದ್ದವಿತ್ತು. ಕಾಳಿಂಗ ಸರ್ಪ ಕಂಡ ತಕ್ಷಣ ಮನೆಯವರು ಹೌಹಾರಿ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ರಾಮನಗುಳಿಯ ಉಪವಲಯ ಅರಣ್ಯಾಧಿಕಾರಿ ಮೆಹಬೂಬ್ ಸಾಬ್ ಅಂಕಲಿ, ಹಜರತ್ ಅಲಿ ಕುಂದಗೋಳ, ಬಸವರಾಜ ಜಂಬಗಿ, ಪ್ರಭುದೇವ ಅವರು ಉರಗ ತಜ್ಞ ಸೂರಜ್ ಅವರಿಗೆ ಹಾವು ಹಿಡಿಯಲು ಸಹಕರಿಸಿದರು.
ಸಿಟ್ಟಿನಲ್ಲಿ ಕೆರಳಿದ್ದ ಕಾಳಿಂಗ ಸರ್ಪವನ್ನು ಸೆರೆಹಿಡಿಯಲು ಸತತ ಎರಡು ಗಂಟೆಗಳ ಕಾಲ ಹರಸಾಹಸ ಪಡಬೇಕಾಯಿತು. ಉರಗಪ್ರೇಮಿ ಸೂರಜ್ ಚಾಕಚಕ್ಯತೆಯಿಂದ ಕಾಳಿಂಗ ಸರ್ಪವನ್ನು ಯಶಸ್ವಿಯಾಗಿ ಸೆರೆಹಿಡಿದರು. ನಂತರ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಅರಣ್ಯಕ್ಕೆ ಬಿಡಲಾಯಿತು.
ಸಮೀಪದ ಕನಕಹಳ್ಳಿಯಲ್ಲಿ ನಾಲ್ಕು ದಿನಗಳ ಹಿಂದೆ 14 ಅಡಿ ಉದ್ದದ ಕಾಳಿಂಗ ಸರ್ಪವನ್ನೂ ಸೆರೆಹಿಡಿಯಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.