ADVERTISEMENT

ಶಿರೂರು ಗುಡ್ಡ ಕುಸಿತ ದುರಂತ: ಏಳಕ್ಕೇರಿದ ಸಾವಿನ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 15:16 IST
Last Updated 18 ಜುಲೈ 2024, 15:16 IST
ಅಂಕೋಲಾ ತಾಲ್ಲೂಕಿನ ಸಗಡಗೇರಿ ಸಮೀಪ ಗಂಗಾವಳಿ ನದಿಯಲ್ಲಿ ತೇಲುತ್ತಿರುವ ಗ್ಯಾಸ್ ಟ್ಯಾಂಕರ್ ರಕ್ಷಣಾ ಕಾರ್ಯಾಚರಣೆಗೆ ಸಿದ್ಧವಾಗಿದ್ದ ವಿಶೇಷ ತಂಡ
ಅಂಕೋಲಾ ತಾಲ್ಲೂಕಿನ ಸಗಡಗೇರಿ ಸಮೀಪ ಗಂಗಾವಳಿ ನದಿಯಲ್ಲಿ ತೇಲುತ್ತಿರುವ ಗ್ಯಾಸ್ ಟ್ಯಾಂಕರ್ ರಕ್ಷಣಾ ಕಾರ್ಯಾಚರಣೆಗೆ ಸಿದ್ಧವಾಗಿದ್ದ ವಿಶೇಷ ತಂಡ   

ಕಾರವಾರ: ಅಂಕೋಲಾ ತಾಲ್ಲೂಕಿನ ಶಿರೂರು ಗುಡ್ಡ ಕುಸಿತ ದುರಂತದಲ್ಲಿ ಈವರೆಗೆ ಹತ್ತು ಮಂದಿ ಕಣ್ಮರೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಅಧಿಕೃತವಾಗಿ ಘೋಷಿಸಿದ್ದು, ಮೃತರ ಸಂಖ್ಯೆ ಏಳಕ್ಕೆ ಏರಿಕೆಯಾಗಿದೆ.

ಗಂಗಾವಳಿ ನದಿ ತಟದ ಗಂಗೆಕೊಳ್ಳದಲ್ಲಿ ಶಿರೂರಿನ ಅವಂತಿಕಾ (6), ಶಿರೂರು ಸಮೀಪದಲ್ಲೇ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯವರಾದ ಲಾರಿ ಚಾಲಕ ಚಿನ್ನನನ್ (51) ಮೃತದೇಹ ದೊರೆಯಿತು. ಬೆಳ್ಳಂಬಾರದ ದಕ್ಷಿಣ ಖಾರ್ವಿವಾಡಾ ಕಡಲತೀರದಲ್ಲಿ ಇನ್ನೊಂದು ಮೃತದೇಹ ಸಿಕ್ಕಿದೆ. ಆದರೆ, ಅದರ ಗುರುತು ಪತ್ತೆಯಾಗಿಲ್ಲ.

ದುರಂತದಲ್ಲಿ ಕಣ್ಮರೆಯಾದ ಲಾರಿ, ಟ್ಯಾಂಕರ್ ಚಾಲಕರನ್ನು ಹುಡುಕಲು ತಮಿಳುನಾಡಿನಿಂದ ಅವರ ಕುಟುಂಬಸ್ಥರು ಬಂದಿದ್ದಾರೆ. ಜಿ.ಪಿ.ಎಸ್ ಲೊಕೇಶನ್ ಆಧರಿಸಿ ಟ್ಯಾಂಕರ್ ಗಳ ಮಾಲೀಕರು ಸ್ಥಳಕ್ಕೆ ಭೇಟಿ ನೀಡಿದ ವೇಳೆ ಅವಘಡ ನಡೆದಿದ್ದು ಅರಿವಿಗೆ ಬಂದಿದ್ದು, ಅವರ ಮಾಹಿತಿ ಆಧರಿಸಿ ಕುಟುಂಬದವರು ಬಂದಿದ್ದರು. ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದ ಅವರ ರೋಧನ ಸ್ಥಳದಲ್ಲಿ ನೆರೆದಿದ್ದವರ ಮನಕಲಕಿತ್ತು.

ADVERTISEMENT

ದುರ್ಘಟನೆಯಲ್ಲಿ ನದಿಯಲ್ಲಿ ತೇಲಿ ಹೋಗಿದ್ದ ಎಲ್.ಪಿ.ಜಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ರಕ್ಷಣೆಯ ಕಾರ್ಯವನ್ನು ಎಚ್.ಪಿ.ಸಿ.ಎಲ್‍ನ ತಜ್ಞರ ತಂಡವು ಎಸ್.ಡಿ.ಆರ್.ಎಫ್ ತಂಡದ ನೆರವಿನೊಂದಿಗೆ ಕೈಗೊಂಡಿತು. ಸಗಡಗೇರಿಯ ನದಿ ದಡಕ್ಕೆ ಸಮೀಪ ಟ್ಯಾಂಕರ್ ನಿಲ್ಲಿಸಿದ್ದ ತಂಡವು ಗುರುವಾರ ಸಂಜೆಯವರೆಗೆ ಸುಮಾರು 18 ಕ್ವಿಂಟಲ್‍ನಷ್ಟು ಗ್ಯಾಸ್‍ನ್ನು ನದಿಗೆ ಬಿಡುವ ಮಲಕ ಶೇ.60 ರಷ್ಟು ದಾಸ್ತಾನನ್ನು ಖಾಲಿ ಮಾಡಿತು. ಮುನ್ನೆಚ್ಚರಿಕೆಯಾಗಿ ಗ್ರಾಮದ 34ಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು. ವಿದ್ಯುತ್ ನಿಲುಗಡೆ ಮಾಡಿ ಕಾರ್ಯಾಚರಿಸಲಾಗಿತ್ತು. ಶುಕ್ರವಾರ ಟ್ಯಾಂಕರ್ ರಕ್ಷಣಾ ಕಾರ್ಯ ಪೂರ್ಣಗೊಳ್ಳಲಿದೆ ಎಂದು ತಂಡವು ತಿಳಿಸಿದೆ.

‘ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತದ ಅವಘಡದಲ್ಲಿ ಈವರೆಗೆ ಹತ್ತು ಮಂದಿ ಕಣ್ಮರೆಯಾಗಿದ್ದ ಮಾಹಿತಿ ಇದ್ದು, ಈ ಪೈಕಿ ಏಳು ಮಂದಿಯ ಮೃತದೇಹ ಪತ್ತೆಯಾಗಿದೆ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಿಳಿಸಿದರು.

‘ಶಿರೂರಿನ ಒಂದೇ ಕುಟುಂಬದ ನಾಲ್ಕು ಮತ್ತು ಅದೇ ಕುಟುಂಬದ ಸಂಬಂಧಿ ಜಗನ್ನಾಥ, ಉಳುವರೆ ಗ್ರಾಮದ ಸಣ್ಣಿ ಗೌಡ, ಮೂರು ಟ್ಯಾಂಕರ್ ಹಾಗೂ ಒಂದು ಲಾರಿಯ ಚಾಲಕ ಕಣ್ಮರೆಯಾಗಿರುವುದಾಗಿ ಅವರ ಕುಟುಂಬಗಳು ಮಾಹಿತಿ ನೀಡಿವೆ. ಮಂಗಳೂರಿನಿಂದ ಹುಬ್ಬಳ್ಳಿಗೆ ಅಡುಗೆ ಅನಿಲ ಪೂರೈಸಲು ಸಾಗುತ್ತಿದ್ದ ಟ್ಯಾಂಕರ್ ನದಿಯಲ್ಲಿ ಬಿದ್ದಿದೆ. ಜೊಯಿಡಾದ ರಾಮನಗರದಿಂದ ಕೇರಳಕ್ಕೆ ನಾಟಾ ಸಾಗಿಸುತ್ತಿದ್ದ ಲಾರಿಯ ಜಿಪಿಎಸ್ ಲೊಕೇಶನ್ ಮಣ್ಣಿನ ರಾಶಿಯ ಬಳಿ ಪತ್ತೆಯಾಗಿದೆ. ಈ ಲಾರಿ ಮಣ್ಣಿನಡಿ ಹುದುಗಿರುವ ಶಂಕೆ ಇದೆ’ ಎಂದೂ ತಿಳಿಸಿದರು.

ಅಂಕೋಲಾದ ಸಗಡಗೇರಿಯಲ್ಲಿ ಸಿಲುಕಿರುವ ಗ್ಯಾಸ್ ಟ್ಯಾಂಕರ್ ಖಾಲಿಯಾದ ತಕ್ಷಣ ಸುರಕ್ಷಿತ ಸ್ಥಳಕ್ಕೆ ಹೊತ್ತೊಯ್ಯಲು ಸಿದ್ಧವಾಗಿದ್ದ ಕ್ರೇನ್ ಮತ್ತು ವಾಹನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.