ಯಲ್ಲಾಪುರ: ತಾಲ್ಲೂಕಿನ ಗಡಿಭಾಗವಾದ ಡೋಂಗ್ರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕನಕನಹಳ್ಳಿಯಲ್ಲಿ ಉರಗ ತಜ್ಞ ಸೂರಜ್ ಶೆಟ್ಟಿ ಅರಬೈಲ್ 14 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪವನ್ನು ಬುಧವಾರ ಸಂಜೆ ಸೆರೆ ಹಿಡಿದಿದ್ದಾರೆ.
ಕಾಳಿಂಗ ಸರ್ಪ ಸಂತೋಷ ಪಟಗಾರ ಎಂಬುವವರ ತೋಟದ ಸುತ್ತಮುತ್ತ ಓಡಾಡಿಕೊಂಡಿತ್ತು. ಮೂರು ದಿನಗಳಿಂದ ಕನಕನಹಳ್ಳಿ, ಕಲ್ಲೇಶ್ವರ ಸುತ್ತಮುತ್ತಲಿನ ತೋಟದಲ್ಲಿ ಓಡಾಡುತ್ತ ಜನರಲ್ಲಿ ತೀವ್ರ ಆತಂಕ ಉಂಟು ಮಾಡಿತ್ತು. ಈ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಉರಗ ತಜ್ಞ ಸೂರಜ್ ಸ್ಥಳಕ್ಕೆ ಬಂದು ಕಾಳಿಂಗ ಸರ್ಪದ ರಕ್ಷಣೆಯ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದರು. ಸಿಟ್ಟಿನಲ್ಲಿ ಕೆರಳಿದ್ದ ಕಾಳಿಂಗ ಸರ್ಪವನ್ನು ಹಿಡಿಯಲು ಹರ ಸಾಹಸ ಪಡಬೇಕಾಯಿತು. ಬಳಿಕ ಮಾತನಾಡಿದ ಅವರು ನೆರೆದ ಜನರಿಗೆ ಕಾಳಿಂಗ ಸರ್ಪದ ಕುರಿತು ಮಾಹಿತಿ ನೀಡಿದರು.
ಅರಣ್ಯ ರಕ್ಷಕ ಗೋಪಾಲಕೃಷ್ಣ ನಾಯಕ, ಸ್ಥಳೀಯರಾದ ಸತೀಶ ಭಟ್ಟ, ಬೊಮ್ಮಯ್ಯ ನಾಯ್ಕ, ಪ್ರಕಾಶ ನಾಯ್ಕ, ರಘುನಾಥ ನಾಯ್ಕ ಈ ಸಂದರ್ಭದಲ್ಲಿ ಇದ್ದರು. ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.