ADVERTISEMENT

ಜೊಯಿಡಾ: ಪೊಲೀಸ್ ಠಾಣೆ ಎದುರು ಯುವಕ ಆತ್ಮಹತ್ಯೆ ಯತ್ನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 13:05 IST
Last Updated 14 ಜೂನ್ 2024, 13:05 IST
   

ಜೊಯಿಡಾ (ಉತ್ತರ ಕನ್ನಡ ಜಿಲ್ಲೆ): ತಾಲ್ಲೂಕಿನ ರಾಮನಗರ ಪೊಲೀಸ್ ಠಾಣೆ ಎದುರು ಗುರುವಾರ ಸಂಜೆ ಭಾಸ್ಕರ ಬೋಂಡೆಲ್ಕರ (28) ಎಂಬಾತ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ. ತಕ್ಞಣವೇ ಬೆಳಗಾವಿ ಕೆಎಲ್‌ಇ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.

‘ತನ್ನ ಮಾವನ ವಿರುದ್ಧ ದಾಖಲಾದ ಪ್ರಕರಣದ ಕುರಿತು ವಿಚಾರಿಸಲು ಭಾಸ್ಕರ, ಪಾನಮತ್ತನಾಗಿ ಠಾಣೆಗೆ ಬಂದಿದ್ದ. ಅಪರಾಧ ವಿಭಾಗದ ಎಸ್ಐ ಬುದ್ಧಿವಾದ ಹೇಳಿದರು. ಕೆಲ ಹೊತ್ತಿನಲ್ಲೇ ಆತ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹೆಚ್ಚಿಕೊಂಡ. ತಕ್ಷಣವೇ ಆತನ ದೇಹಕ್ಕೆ ಬಟ್ಟೆ ಸುತ್ತಿ, ಬೆಂಕಿ ನಂದಿಸಲಾಯಿತು. ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವುದರ ಜೊತೆಗೆ ಆತ್ಮಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಭಾಸ್ಕರ ವಿಡಿಯೊ ಮಾಡಿದ್ದು, ಪಿಎಸ್‌ಐ ಕಿರುಕುಳ ನೀಡಿರುವ ಕುರಿತು ಆರೋಪಿಸಿದ್ದಾನೆ.

ADVERTISEMENT

‘ಕೆಲ ತಿಂಗಳ ಹಿಂದೆ ಜೂಜಾಟದ ಸಂದರ್ಭದಲ್ಲಿ ದಾಳಿ ನಡೆದಾಗ ರಾಮನಗರ ಪಿಎಸ್ಐ ₹3.65 ಲಕ್ಷ ವಶಕ್ಕೆ ಪಡೆದಿದ್ದರು. ಆದರೆ, ಪ್ರಕರಣದಲ್ಲಿ ₹36 ಸಾವಿರ ಮಾತ್ರ ವಶಕ್ಕೆ ಪಡೆದಿದ್ದಾಗಿ ತೋರಿಸಿದ್ದರು. ಈ ಬಗ್ಗೆ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ದಾಂಡೇಲಿ ಡಿಎಸ್‍ಪಿ ಅವರಿಗೆ ಮನವಿ ನೀಡಿದಾಗ ಅವರು ಮನವಿ ಸ್ವೀಕರಿಸಲಿಲ್ಲ. ಈ ಘಟನೆ ನಂತರ ಪಿಎಸ್ಐ ತನಗೆ ಸಾಕಷ್ಟು ಕಿರುಕುಳ ನೀಡಿದರು’ ಎಂದು ಹೇಳಿದ್ದಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.