ADVERTISEMENT

122 ಕೆ.ಜಿ ತೂಕದ ಸೈಕಲ್‍ನಲ್ಲಿ 19 ರಾಜ್ಯ ಪರ್ಯಟನೆ!

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2024, 1:24 IST
Last Updated 25 ಸೆಪ್ಟೆಂಬರ್ 2024, 1:24 IST
ಸೈಕಲ್ ಪರ್ಯಟನೆ ಮಾಡುತ್ತ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿರುವ ತಮಿಳುನಾಡಿನ ಮುತ್ತು ಸೆಲ್ವನ್
ಸೈಕಲ್ ಪರ್ಯಟನೆ ಮಾಡುತ್ತ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಆವರಣ ತಲುಪಿರುವ ತಮಿಳುನಾಡಿನ ಮುತ್ತು ಸೆಲ್ವನ್   

ಕಾರವಾರ: ತಮಿಳುನಾಡು ರಾಜ್ಯದ ಕೊಯಮತ್ತೂರಿನ ಯುವಕನೊಬ್ಬ 122 ಕೆ.ಜಿ ಭಾರದ ಸೈಕಲ್ ಚಲಾಯಿಸಿಕೊಂಡು ಕಳೆದ 1,009 ದಿನಗಳಿಂದ ದೇಶದ 19 ರಾಜ್ಯಗಳಲ್ಲಿ ಪರ್ಯಟನೆ ನಡೆಸಿ, ಮಂಗಳವಾರ ನಗರಕ್ಕೆ ತಲುಪಿದ್ದಾರೆ.

ಮುತ್ತು ಸೆಲ್ವನ್ ಎಂಬ 26ರ ಹರೆಯದ ಎಂ.ಬಿ.ಎ ಪದವೀಧರ ಯುವಕ ವಿಶ್ವ ದಾಖಲೆ ಬರೆಯುವ ಸಲುವಾಗಿ ಸಾಧಾರಣ ಸೈಕಲ್‍ಗೆ ರಾಷ್ಟ್ರಧ್ವಜ ಕಟ್ಟಿಕೊಂಡು, ಪುನೀತ್ ರಾಜಕುಮಾರ್ ಭಾವಚಿತ್ರವಿರುವ ಭಾರದ ಪೆಟ್ಟಿಗೆ ಇರಿಸಿಕೊಂಡು ಊರೂರು ಸಂಚರಿಸುತ್ತಿದ್ದಾರೆ. ಹೀಗೆ ತಾನು ಸಂಚರಿಸುವ ಊರಿನಲ್ಲಿ ನೆನಪಿಗೆ ಗಿಡ ನೆಡುತ್ತಿರುವುದು ವಿಶೇಷವಾಗಿದೆ.

‘ನಾನು ಪುನೀತ್ ಅಭಿಮಾನಿ. ಅವರು ಮೃತರಾದ ತಿಂಗಳ ಬಳಿಕ 2021ರ ಡಿ.21 ರಂದು ಕೊಯಮತ್ತೂರಿನಿಂದ ಪುನೀತ್ ನೆನಪಿಗೆ ಸೈಕಲ್ ಪರ್ಯಟನೆ ಆರಂಭಿಸಿದೆ. 1,111 ದಿನ ಸತತವಾಗಿ ಸೈಕಲ್‍ನಲ್ಲಿ ಸಂಚರಿಸುವ ಜತೆಗೆ ಐದು ಲಕ್ಷ ಸಸಿಗಳನ್ನು ನೆಡುವ ಉರಿ ಇಟ್ಟುಕೊಂಡಿದ್ದೇನೆ. ಈಗಾಗಲೆ 4,55,300 ಸಸಿಗಳನ್ನು ನೆಟ್ಟಿದ್ದೇನೆ’ ಎಂದು ಮುತ್ತು ಸೆಲ್ವನ್ ತಿಳಿಸಿದರು.

ADVERTISEMENT

‘ಸೈಕಲ್‍ನಲ್ಲಿಯೇ ಅಡುಗೆ ಸಾಮಗ್ರಿ, ಬಟ್ಟೆಗಳನ್ನು ಇಟ್ಟುಕೊಂಡಿದ್ದೇನೆ. ರಾತ್ರಿ ವೇಳೆ ಪೆಟ್ರೋಲ್ ಬಂಕ್‍ಗಳ ಆವರಣದಲ್ಲಿ ತಂಗುತ್ತೇನೆ. ಅಡುಗೆಯನ್ನು ಸ್ವತಃ ಸಿದ್ಧಪಡಿಸಿಕೊಳ್ಳುತ್ತೇನೆ. ಸ್ಥಳಿಯ ಅರಣ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ಅನುಮತಿ ಪಡೆದು ಅವರ ನೆರವಿನೊಂದಿಗೆ ಸಸಿ ನೆಡುತ್ತ ಸಾಗುತ್ತೇನೆ. ಜನರಲ್ಲಿ ಪರಿಸರ ಜಾಗೃತಿ ಮೂಡಿಸುವ ಜತೆಗೆ ವುಶ್ವ ದಾಖಲೆ ಬರೆಯುವುದು ನನ್ನ ಉದ್ದೇಶ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.