ಕಾರವಾರ: ದೆಹಲಿ ಸರ್ಕಾರದ ಅಬಕಾರಿ ನೀತಿ ಹಗರಣದ ನೆಪವೊಡ್ಡಿ ರಾತ್ರೋ ರಾತ್ರಿ ದೆಹಲಿ ಮುಖ್ಯಮಂತ್ರಿ ಅರವೀದ ಕೇಜ್ರಿವಾಲ್ ಬಂಧಿಸಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷದ (ಆಪ್) ಜಿಲ್ಲಾ ಘಟಕದ ಪದಾಧಿಕಾರಿಗಳು ಇಲ್ಲಿನ ಗಾಂಧಿ ಪ್ರತಿಮೆ ಎದುರು ಶುಕ್ರವಾರ ಸಾಂಕೇತಿಕ ಧರಣಿ ನಡೆಸಿದರು.
ಗಾಂಧಿ ಪ್ರತಿಮೆಗೆ ಗೌರವ ಅರ್ಪಿಸಿದ ಬಳಿಕ ಕೆಲ ಹೊತ್ತು ಮೌನ ಆಚರಿಸಿದ ಪದಾಧಿಕಾರಿಗಳು ಬಳಿಕ ಜಾರಿ ನಿರ್ದೇಶನಾಲಯವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿ, ಘಟನೆ ಖಂಡಿಸಿದರು.
‘ದೆಹಲಿಯಲ್ಲಿ ಅಭಿವೃದ್ಧಿಗೆ ಹೊಸ ಭಾಷ್ಯ ಬರೆದ ಅರವಿಂದ ಕೇಜ್ರಿವಾಲ್ ಆಡಳಿತವನ್ನು ದೇಶವೇ ಮೆಚ್ಚಿಕೊಳ್ಳಲಾರಂಭಿಸಿದೆ. ಅವರ ಆಡಳಿತ, ಭ್ರಷ್ಟಾಚಾರ ರಹಿತ ವ್ಯವಸ್ಥೆಯನ್ನು ಸಹಿಸದ ಬಿಜೆಪಿ ಸರ್ಕಾರವು ಕೇಜ್ರಿವಾಲ್ ಅವರನ್ನು ಬಂಧಿಸಿ ಉತ್ತಮ ಆಡಳಿತ ಹತ್ತಿಕ್ಕುವ ಪ್ರಯತ್ನ ನಡೆಸಿದೆ’ ಎಂದು ಆಪ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಲಿಯೋ ಲೂಯಿಸ್ ಆರೋಪಿಸಿದರು.
ಧರಣಿಯಲ್ಲಿ ಆಪ್ ಜಿಲ್ಲಾ ಘಟಕದ ಕಾರ್ಯದರ್ಶಿ ಗುರುದೀಪ್ ಸಿಂಗ್, ಕಿಶೋರ ಸಾವಂತ್, ಯಾಕೂಬ್ ಅಲಿ ಪಾಲ್ಗೊಂಡಿದ್ದರು. ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಸದಸ್ಯ ಅಲ್ತಾಫ್ ಶೇಖ್ ಬೆಂಬಲ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.