ಕಾರವಾರ: ಇಲ್ಲಿನ ಕೋಡಿಬಾಗದಲ್ಲಿ ಆಗಸ್ಟ್ 7ರಂದು ಬಿದ್ದ ಕಾಳಿ ನದಿಯ ಹಳೆ ಸೇತುವೆಯ ಅವಶೇಷ ತೆರವುಗೊಳಿಸುವ ಎರಡನೇ ಹಂತದ ಕಾರ್ಯಾಚರಣೆಗೆ ಎರಡು ಬಾರ್ಜ್ ಸಿದ್ಧವಾಗಿವೆ.
ಸೇತುವೆಯ ಕಾಂಕ್ರೀಟ್ ಅವಶೇಷಗಳನ್ನು ಒಡೆಯುವುದರ ಜೊತೆಗೆ ನದಿಯಿಂದ ಅವುಗಳನ್ನು ಮೇಲೆತ್ತಲು ಕ್ರೇನ್, ಇನ್ನಿತರ ಯಂತ್ರ ಒಳಗೊಂಡ ಬಾರ್ಜ್ ಬುಧವಾರ ಸೇತುವೆ ಸಮೀಪದ ಜೆಟ್ಟಿ ತಲುಪಿತ್ತು. ಗುರುವಾರ ಇನ್ನೊಂದು ಬಾರ್ಜ್ ಕೂಡ ಬಂದಿದೆ. ಇದು ನದಿಯಿಂದ ಮೇಲೆತ್ತಿದ ಅವಶೇಷಗಳನ್ನು ಹೊತ್ತು ದಡಕ್ಕೆ ತಂದು ದಾಸ್ತಾನು ಮಾಡಲಿದೆ.
‘ಕಾರ್ಯಾಚರಣೆಗೆ ಅಗತ್ಯವಿರುವ ಎರಡು ಬಾರ್ಜ್ ಸದ್ಯ ಬಂದಿವೆ. ಇನ್ನೂ ಒಂದು ಬಾರ್ಜ್ ಮತ್ತು ಹಲವು ಯಂತ್ರೋಪಕರಣ ಮುಂಬೈನಿಂದ ಬರಬೇಕಿದೆ. ಒಂದೆರಡು ದಿನದಲ್ಲಿ ಅವು ಕಾರವಾರ ತಲುಪಬಹುದು. ಅಕ್ಟೋಬರ್ 21 ರಿಂದ ಕಾರ್ಯಾಚರಣೆ ಆರಂಭಗೊಳ್ಳಲಿದೆ’ ಎಂದು ಐಆರ್ಬಿ ಕಂಪನಿಯ ಎಂಜಿನಿಯರ್ ತಿಳಿಸಿದರು.
‘ನದಿಯಲ್ಲಿ ಕಾರ್ಯಾಚರಣೆ ನಡೆಸಲು ಕ್ರಿಯಾಯೋಜನೆ ಸಲ್ಲಿಕೆ ಜೊತೆಗೆ ಪೂರ್ವಾನುಮತಿ ಪಡೆಯಬೇಕು. ಕಂಪನಿಯು ಈವರೆಗೆ ಕ್ರಿಯಾಯೋಜನೆ ಪಟ್ಟಿ ಸಲ್ಲಿಸಿಲ್ಲ. ಆದರೆ, ಅವರಿಗೆ ಅನುಕೂಲವಾಗಲೆಂದು ಜೆಟ್ಟಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ’ ಎಂದು ಬಂದರು ಜಲಸಾರಿಗೆ ಮಂಡಳಿಯ ನಿರ್ದೇಶಕ ಕ್ಯಾಪ್ಟನ್ ಸಿ.ಸ್ವಾಮಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.