ADVERTISEMENT

ಮುರುಡೇಶ್ವರ; ಮಹಾಶಿವರಾತ್ರಿ ಜಾಗರಣೆ ಉತ್ಸವ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2024, 14:18 IST
Last Updated 7 ಮಾರ್ಚ್ 2024, 14:18 IST

ಭಟ್ಕಳ:  ಮಹಾಶಿವರಾತ್ರಿ ಪ್ರಯುಕ್ತ ಮುರ್ಡೇಶ್ವರದಲ್ಲಿ ಮಹಾಶಿವರಾತ್ರಿ ಜಾಗರಣೆ ಉತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮಾರ್ಚ್ 8ರಂದು ಸಂಜೆ 6ರಿಂದ 9ರ ಬೆಳಿಗ್ಗೆ 6ರ ತನಕ ಭಕ್ತಿಪ್ರಧಾನ ಕಾರ್ಯಕ್ರಮ ನಡೆಯಲಿವೆ ಎಂದು ಭಟ್ಕಳ ಉಪವಿಭಾಗಾಧಿಕಾರಿ ಡಾ. ನಯನಾ ಎನ್. ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದ್ದು, ಸಕಲ ಸಿದ್ಧತೆ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಕಲಾವಿದರೂ ಸೇರಿ ರಾಷ್ಟ್ರ ಮಟ್ಟದ ಕಲಾವಿದರಿಂದ ಮನೋರಂಜನೆ, ಧ್ಯಾನ, ಧಾರ್ಮಿಕ ಕಾರ್ಯಕ್ರಮ, ಪ್ರಥಮ ಬಾರಿಗೆ ಲೇಜರ್ ಶೋ ಮತ್ತು ತ್ರೀಡಿ ಮ್ಯಾಪಿಂಗ್ ಕಾರ್ಯಕ್ರಮ ನಡೆಯಲಿವೆ. ಗಾಯಕರಾ ಅನನ್ಯ ಭಟ್, ಶಂದ್ಯಾ ಯೋಗ, ಅಶ್ವಿನ್ ಶರ್ಮ, ವಿಧುಶ್ರೀ ವೀಣಾ ವಾರುಣಿ ಮತ್ತು ತಂಡ, ನಿರೂಪಕರಾದ ಪ್ರತಿಭಾ ಗೌಡ, ನಿರಂಜನ್ ದೇಶಪಾಂಡೆ, ಕಲಾವಿದರಾದ ಗಾನವಿ ಲಕ್ಷಣ್, ಬಿಗ್‌ಬಾಸ್ ವಿಜೇತ ಕಾರ್ತಿಕ್ ಮಹೇಶ ಮತ್ತು ತಂಡ, ತಾಲ್ಲೂಕಿನ ಕಲಾವಿದರು, ಭಟ್ಕಳದ ನೃತ್ಯ ತಂಡ, ಯಕ್ಷಗಾನ ತಂಡ ಪ್ರದರ್ಶನ ನೀಡಲಿದೆ ಎಂದು ಹೇಳಿದರು.

ADVERTISEMENT

ಪ್ರಥಮ ಬಾರಿಗೆ ಮುರ್ಡೇಶ್ವರದಲ್ಲಿ ಶಿವರಾತ್ರಿ ಜಾಗರಣೆ ನಡೆಯಲಿದ್ದು, ಅಂದಾಜು ಐದಾರು ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಜನರಿಗೆ ಅನುಕೂಲ ಕಲ್ಪಿಸಲು, ಕಲಾವಿದರಿಗೆ ಊಟ, ವಸತಿ ವ್ಯವಸ್ಥೆ ಕಲ್ಪಿಸಲು ಸಿದ್ಧತೆ ಮಾಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.