ಭಟ್ಕಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಭಟ್ಕಳ ತಾಲ್ಲೂಕಿನ ಮಾವಳ್ಳಿ ಕೇಂದ್ರದ ಮುಂಗಾರಿನ ಯಂತ್ರಶ್ರೀ ಭತ್ತ ನಾಟಿ ಕಾರ್ಯಕ್ಕೆ ಸಾರದಹೊಳೆಯ ರವೀಂದ್ರ ನಾಯ್ಕ ಅವರ ಗದ್ದೆಯಲ್ಲಿ ಈಚೆಗೆ ಚಾಲನೆ ನೀಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಭಟ್ಕಳ ತಾಲ್ಲೂಕು ಯೋಜನಾಧಿಕಾರಿ ಗಣೇಶ ನಾಯ್ಕ ಅವರು ನಾಟಿ ಯಂತ್ರ ಚಲಾಯಿಸುವ ಮೂಲಕ ಮುಂಗಾರಿನ ಪ್ರಥಮ ಭತ್ತ ನಾಟಿಗೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ತಾಲ್ಲೂಕಿನಲ್ಲಿ ಒಟ್ಟು 700 ಎಕರೆಯಲ್ಲಿ ಯಾಂತ್ರಿಕೃತ ಭತ್ತ ಬೇಸಾಯ ಯಂತ್ರಶ್ರೀ ಗುರಿ ಹಾಕಲಾಗಿದೆ. ಇದರಿಂದ ಕೂಲಿಕಾರ್ಮಿಕರ ಸಮಸ್ಯೆ ನಿವಾರಣೆಯಾಗುವುದಲ್ಲದೇ ವೆಚ್ಚವೂ ಕಡಿಮೆ ಆಗುವುದರಿಂದ ಕಡಿಮೆ ವೆಚ್ಚದಲ್ಲಿ ಅಧಿಕ ಇಳುವರಿ ಪಡೆಯಲು ಅನುಕೂಲವಾಗಿದೆ’ ಎಂದರು.
‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ 6 ವರ್ಷದಿಂದ ರೈತರಿಗೆ ಮಾಹಿತಿ ನೀಡಿ, ಅಗತ್ಯದ ಟ್ರೇಗಳನ್ನು ನೀಡಿ ಸಸಿ ಮಡಿ ತಯಾರು ಮಾಡಿಸಿ ಯಂತ್ರಶ್ರೀ ಯಾಂತ್ರಿಕೃತ ಭತ್ತ ಬೇಸಾಯ ಮಾಡಿಸಲಾಗುತ್ತಿದೆ’ ಎಂದು ಹೇಳಿದರು.
ಸಿ.ಎಚ್.ಎಚ್.ಸಿ. ಮ್ಯಾನೇಜರ್ ಸುಮಂತ, ಕೃಷಿ ಮೇಲ್ವಿಚಾರಕ ಮಹೇಶ ಹೆಗಡೆ, ರೈತರಾದ ರವೀಂದ್ರ ನಾಯ್ಕ, ಯಂತ್ರಶ್ರೀ ಯಂತ್ರದ ಚಾಲಕ ಕುಮಾರ್. ಗೋಪಾಲ ಮುಂತಾದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.