ADVERTISEMENT

ಟಿಎಸ್‌ಎಸ್‌: ನಿಯಮ ಮೀರಿ ಸಾಲ, ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 0:14 IST
Last Updated 6 ಜೂನ್ 2024, 0:14 IST

ಶಿರಸಿ: ಸಂಘದ ನಿಯಮಾವಳಿಗೆ ವಿರುದ್ಧವಾಗಿ ಹಾಗೂ ವಂಚನೆಯ ಉದ್ದೇಶದಿಂದ ನೂರಾರು ಕೋಟಿ ಸಾಲ ನೀಡಿ ಸಂಘಕ್ಕೆ ನಷ್ಟ ಮಾಡಿದ ಆರೋಪದ ಮೇಲೆ ಇಲ್ಲಿನ ತೋಟಗಾರ್ಸ್ ಸೇಲ್ ಸೊಸೈಟಿ (ಟಿಎಸ್ಎಸ್) ಹಿಂದಿನ ಪ್ರಧಾನ ವ್ಯವಸ್ಥಾಪಕ ರವೀಶ ಅಚ್ಯುತ ಹೆಗಡೆ ಮತ್ತು ಹಿಂದಿನ ಕಾರ್ಯಾಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಸೇರಿ ಐವರ ವಿರುದ್ಧ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಂಘದ ಪ್ರಭಾರಿ ಪ್ರಧಾನ ವ್ಯವಸ್ಥಾಪಕ ವಿಜಯಾನಂದ ಭಟ್ ಮಂಗಳವಾರ ಸಂಜೆ  ಪ್ರಕರಣ ದಾಖಲಿಸಿದ್ದು, ‘ರವೀಶ ಹೆಗಡೆ ಹಾಗೂ ರಾಮಕೃಷ್ಣ ಹೆಗಡೆ ಕಡವೆ ಅವರು ಜತೆಯಾಗಿ ಸಂಘದ ನಿವೃತ್ತ ಸಿಬ್ಬಂದಿ ಅನಿಲಕುಮಾರ ಸಿದ್ದಪ್ಪ ಮುಷ್ಟಗಿ ಹೆಸರಿನಲ್ಲಿ ₹44.09 ಕೋಟಿ, ಸದಸ್ಯರಾದ ಪ್ರವೀಣ ಹೆಗಡೆ ಹೆಸರಲ್ಲಿ ₹33.66 ಕೋಟಿ ಹಾಗೂ ಮಹಾಬಲೇಶ್ವರ ಗಣಪತಿ ಹೆಗಡೆ ಹೆಸರಿನಲ್ಲಿ ₹22.88 ಕೋಟಿ ಸಾಲವನ್ನು ಸ್ವಂತಕ್ಕೆ ಲಾಭ ಮಾಡಿಕೊಳ್ಳುವ ಮತ್ತು ಸಂಘಕ್ಕೆ ನಷ್ಟ ಮಾಡುವ ದುರುದ್ದೇಶದಿಂದ ನೀಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

‘ಇಷ್ಟು ದೊಡ್ಡ ಮೊತ್ತ ಸಾಲ ನೀಡುವಾಗ ಪರಿಗಣಿಸುವ ಸಾಲಗಾರನ ಆಸ್ತಿ ಮೌಲ್ಯ, ಮರುಪಾವತಿಯ ಮಾರ್ಗ ಪರಿಶೀಲಿಸಿಲ್ಲ. ಸೂಕ್ತ ಭದ್ರತೆಯಿಲ್ಲದೆ ನೀಡಲಾಗಿದೆ. ಇದರಿಂದ ಸಂಘಕ್ಕೆ ತುಂಬ ನಷ್ಟವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ದೂರಿನಲ್ಲಿ ಕೋರಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.