ಕಾರವಾರ: ‘ಗೃಹಲಕ್ಷ್ಮಿ’, ‘ಅನ್ನಭಾಗ್ಯ’ ಯೋಜನೆಯ ಮೊದಲ ಕಂತಿನ ಹಣವೇನೋ ಬಂದಿದೆ. ಆದರೆ, ಎರಡು, ಮೂರನೆ ಕಂತಿನ ಹಣ ಬಂದಿಲ್ಲ ಎಂಬ ದೂರು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅಧ್ಯಕ್ಷತೆಯಲ್ಲಿ ಇಲ್ಲಿನ ಸಾಗರ ದರ್ಶನ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾಮಟ್ಟದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಕೇಳಿಬಂತು.
ಶಿರಸಿಯ ಮಹಿಳೆಯೊಬ್ಬರು ತನಗೆ ಪಡಿತರ ಚೀಟಿ ಇಲ್ಲ. ಹೀಗಾಗಿ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಆಗುತ್ತಿಲ್ಲ. ನನಗೆ ಯೋಜನೆಯ ಅಡಿ ಹಣ ಬರುವಂತೆ ಮಾಡಿಕೊಡಿ ಎಂದು ಕೇಳಿಕೊಂಡರು. ಇದೇ ವೇಳೆ ಸಮಸ್ಯೆಯ ಕುರಿತು ಗಮನಸೆಳೆದ ಕಾಂಗ್ರೆಸ್ ಮುಖಂಡ ಕೆ.ಶಂಭು ಶೆಟ್ಟಿ, ‘ಗ್ಯಾರಂಟಿ ಯೋಜನೆಯಲ್ಲಿ ಹಣ ಬಾರದಿರುವುದರ ಕುರಿತಾಗಿಯೆ ನಿತ್ಯ ಶಾಸಕರ ಕಚೇರಿಗೆ ಹಲವು ದೂರು ಬರುತ್ತಿವೆ. ಈ ಬಗ್ಗೆ ಗಮನಹರಿಸಿ. ಸರ್ಕಾರದ ಜನಪರ ಯೋಜನೆ ಜನರಿಗೆ ತಲುಪಿಸಲು ಮುತುವರ್ಜಿ ವಹಿಸಿ’ ಎಂದು ಮನವಿ ಮಾಡಿದರು.
ಶಾಸಕ ಸತೀಶ ಸೈಲ್, ಗೃಹಲಕ್ಷ್ಮಿ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡವರ ಪಟ್ಟಿಯ ಜತೆಗೆ ಯೋಜನೆಯಡಿ ಕಂತಿನ ಹಣ ಪಡೆಯುತ್ತಿರುವವರ ಮಾಹಿತಿಯನ್ನು ವಾರದೊಳಗೆ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿಗೆ ಸೂಚಿಸಿದರು.
ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಳ ಆಗಿಲ್ಲ. ಸೌಕರ್ಯಗಳು ಸಕಾಲಕ್ಕೆ ಸಿಗುತ್ತಿಲ್ಲ ಎಂದು ಆಶಾ ಕಾರ್ಯಕರ್ತೆಯರ ಸಂಘದವರು ಮನವಿ ಮಾಡಿದರು. ಬಿಣಗಾದಲ್ಲಿ ಹೆದ್ದಾರಿಗೆ ಸರ್ವಿಸ್ ರಸ್ತೆ ನಿರ್ಮಿಸಲು ವಿಷ್ಣು ಹರಿಕಾಂತ ಒತ್ತಾಯಿಸಿದರು. ಅಮದಳ್ಳಿಯಲ್ಲಿ ತಟರಕ್ಷಕ ದಳದ ವಸತಿ ನಿಲಯ ಕಟ್ಟಡ ಕಾಮಗಾರಿಯಿಂದ ಎದುರಾದ ತೊಂದರೆಯ ಕುರಿತು ಗ್ರಾಮ ಪಂಚಾಯ್ತಿ ಅಧ್ಯಕ್ಷ ಪುರುಷೋತ್ತಮ ಗೌಡ ಗಮನಸೆಳೆದರು.
ಕಂದಾಯ ಇಲಾಖೆಗೆ ಸಂಬಂಧಿಸಿದ 44, ಪಂಚಾಯತ್ರಾಜ್ ಎಂಜಿನಿಯರಿಂಗ್ ವಿಭಾಗಕ್ಕೆ ಸೇರಿದ 24, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದ 13 ಸೇರಿದಂತೆ ಸುಮಾರು 168 ಅರ್ಜಿಗಳು ಸಲ್ಲಿಕೆಯಾದವು.
‘ಜನರು ನೀಡಿರುವ ದೂರುಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಹತ್ತು ದಿನದೊಳಗೆ ಸಮಸ್ಯೆ ಇತ್ಯರ್ಥಪಡಿಸಬೇಕು. ಸ್ಪಂದಿಸಲು ಆಲಸ್ಯ ತೋರುವ ಅಧಿಕಾರಿಗಳು ಶಿಸ್ತುಕ್ರಮ ಎದುರಿಸಬೇಕಾಗುತ್ತದೆ’ ಎಂದು ಸಚಿವ ಮಂಕಾಳ ವೈದ್ಯ ಎಚ್ಚರಿಸಿದರು.
‘ಜನರು ಸಮಸ್ಯೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದರೆ ನಾವೂ ಆಸಕ್ತಿಯಿಂದ ಕೆಲಸ ಮಾಡಲು ಅನುಕೂಲವಾಗುತ್ತದೆ’ ಎಂದು ಶಾಸಕ ಸತೀಶ ಸೈಲ್ ಹೇಳಿದರು.
‘ಜಿಲ್ಲಾಕೇಂದ್ರ ದೂರವಿರುವುದರಿಂದ ಜಿಲ್ಲೆಯ ಘಟ್ಟದ ಮೇಲಿನ ಭಾಗದ ಜನರಿಗೆ ಬರಲು ಸಮಸ್ಯೆ ಆಗಬಹುದು. ಹೀಗಾಗಿ ಶಿರಸಿ ಭಾಗದಲ್ಲಿಯೂ ಜಿಲ್ಲಾಮಟ್ಟದ ಜನತಾ ದರ್ಶನ ನಡೆಸಬೇಕು’ ಎಂದು ಶಾಸಕ ಭೀಮಣ್ಣ ನಾಯ್ಕ ಒತ್ತಾಯಿಸಿದರು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್, ಜಿಲ್ಲಾ ಪಂಚಾಯ್ತಿ ಸಿಇಒ ಈಶ್ವರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ರಜಪೂತ, ಇತರ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.