ಕಾರವಾರ: ತಾಲ್ಲೂಕಿನ ಮಾಜಾಳಿ ಚೆಕ್ಪೋಸ್ಟ್ ನಲ್ಲಿ ಅ.15ರಂದು ರಾತ್ರಿ ಲಾರಿ ಚಾಲಕನೊಬ್ಬನ ಮೇಲೆ ಹಲ್ಲೆಗೈದ ಆರೋಪದಡಿ ಅಬಕಾರಿ ಇನ್ಸ್ಪೆಕ್ಟರ್ ಸದಾಶಿವಗ ಕೊರತಿ ಮತ್ತು ಅಬಕಾರಿ ಅಧಿಕಾರಿ ಹೇಮಚಂದ್ರ ಎಂಬುವವರ ವಿರುದ್ಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ಬನಶಂಕರಿಯ ಲಾರಿ ಚಾಲಕ ಎ.ಆರ್.ಕುಮಾರ್ ನೀಡಿದ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಗೋವಾದಿಂದ ಕೇರಳಕ್ಕೆ ವಾಟರ್ ಫಿಲ್ಟರ್ ಸಾಗಿಸುವ ವೇಳೆ ಮಾಜಾಳಿ ಚೆಕ್ಪೋಸ್ಟ್ ಬಳಿ ಲಾರಿ ನಿಲ್ಲಿಸಿದ್ದ ಅಧಿಕಾರಿಗಳು ವಾಹನದ ಟಾರ್ಪಾಲ್ ಬಿಚ್ಚಲು ತಿಳಿಸಿದ್ದರು. ಇದಕ್ಕೆ ನಿರಾಕರಿಸಿದಾಗ ಬೈದು, ಹಲ್ಲೆ ಮಾಡಿದ್ದರು ಎಂಬುದಾಗಿ ಚಾಲಕ ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಚಾಲಕ ಗಂಭೀರವಾಗಿ ಗಾಯಗೊಳ್ಳುವಂತೆ ಹಲ್ಲೆ ಮಾಡಿದ್ದಕ್ಕೆ ಪ್ರಕರಣ ದಾಖಲಾಗಿದ್ದರೂ ಅಬಕಾರಿ ಅಧಿಕಾರಿಗಳನ್ನು ಬಂಧಿಸಿಲ್ಲ. ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಿಲ್ಲ. ಇದನ್ನು ಖಂಡಿಸಿ ಅ.21ರಂದು ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸುತ್ತೇವೆ’ ಎಂದು ಉತ್ತರ ಕನ್ನಡ ಸರಕು ಸಾಗಣೆ ಲಾರಿ ಮಾಲಿಕರ ಸಂಘದ ಅಧ್ಯಕ್ಷ ಮಾಧವ ನಾಯಕ ಎಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.