ಯಲ್ಲಾಪುರ: ಪಟ್ಟಣದ ಜೋಡುಕೆರೆ ಬಳಿಯಿರುವ ಮೀನುಗಾರಿಕಾ ಇಲಾಖೆಯ ಮೀನು ಪಾಲನಾ ತೊಟ್ಟಿಯಿಂದ ಎರಡು ಲಕ್ಷಕ್ಕೂ ಹೆಚ್ಚು ಮೀನುಮರಿಗಳನ್ನು ಕಳ್ಳತನ ಮಾಡಲಾಗಿದೆ ಎಂದು ಮೀನುಗಾರಿಕಾ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕಿ ಮುಕ್ತಾ ಪಟಗಾರ ಸೋಮವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಭಾನುವಾರ ಸಂಪೂರ್ಣ ಲಾಕ್ಡೌನ್ ಇತ್ತು. ಮೀನುಗಾರಿಕಾ ಇಲಾಖೆಯ ಮೀನು ಪಾಲನಾ ತೊಟ್ಟಿಗಳನ್ನು ಕಾಯಲು ಕಾವಲುಗಾರರ ನೇಮಕ ಮಾಡಿಕೊಂಡಿಲ್ಲ, ಹೀಗಾಗಿ, ಕಿಡಿಗೇಡಿಗಳು ರಾತ್ರಿಯ ಸಮಯದಲ್ಲಿ ತೊಟ್ಟಿಗೆ ಜೋಡಿಸಿರುವ ನೀರಿನ ಪೈಪ್ ಹಾಗೂ ವಾಲ್ವ್ಗಳನ್ನು ಒಡೆದು, ಬಲೆ ಹಾಕಿ ಮೀನು ಮರಿಗಳನ್ನು ಕಳ್ಳತನ ಮಾಡಿರಬಹುದು ಅಥವಾ ಮೂರು ತೊಟ್ಟಿಯಲ್ಲಿರುವ ಮೀನುಮರಿಗಳನ್ನು ಜೋಡುಕೆರೆಯ ಹನುಮಂತ ಕೆರೆಗೆ ಬಿಟ್ಟು ಹಾಕಿರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಒಂದು ಲಕ್ಷ ಕಟ್ಲಾ ಮರಿಗಳು(ಮೌಲ್ಯ ₹ 26,600), ಒಂದು ಲಕ್ಷ ಸಾಮಾನ್ಯ ಗೆಂಡೆ ಮೀನು ಮರಿಗಳು (ಮೌಲ್ಯ ₹ 20,400) ಕಳ್ಳತನ ವಾಗಿರಬಹುದು ಎಂದು ಅಂದಾಜಿಸಲಾಗಿದೆ. ಒಡೆದಿರುವ ಪೈಪ್ ಮೌಲ್ಯ ₹ 15ಸಾವಿರ ಸೇರಿ ಸುಮಾರು ₹ 61,600 ನಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.
.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.