ಕಾರವಾರ: ಮೀನುಗಾರಿಕೆಗೆ ತೆರಳಿದ ಮೀನುಗಾರರ ಮೇಲೆ ದಬ್ಬಾಳಿಕೆ ನಡೆಸುವ ಜತೆಗೆ ಲಕ್ಷಾಂತರ ಮೌಲ್ಯದ ಮೀನುಗಾರಿಕೆ ಪರಿಕರಗಳನ್ನು ನೌಕಾದಳದ ಕೆಲ ಸಿಬ್ಬಂದಿ ನಾಶಪಡಿಸುತ್ತಿದ್ದು, ಈ ಕೃತ್ಯಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿ ಹರಿಕಂತ್ರ ಮಹಾಜನ ಸಂಘದ ತಾಲ್ಲೂಕು ಘಟಕದಿಂದ ಗುರುವಾರ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಅವರಿಗೆ ಮನವಿ ಸಲ್ಲಿಸಲಾಯಿತು.
‘ಸೆ.18 ರಂದು ಮುದಗಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ವೀರ ಗಣಪತಿ ಎಂಬ ಹೆಸರಿನ ಪರ್ಸಿನ್ ಬೋಟ್ನವರು ಮೀನು ಹಿಡಿಯಲು ಬೀಸಿದ್ದ ಬಲೆಯನ್ನು ನೌಕಾದಳದ ಸಿಬ್ಬಂದಿ ಎಳೆದೊಯ್ದು, ಬಲೆ ಮತ್ತು ಬೋಟ್ಗೆ ಹಾನಿಯುಂಟು ಮಾಡಿದ್ದಾರೆ. ಬಲೆಗೆ ಬಿದ್ದಿದ್ದ ಲಕ್ಷಕ್ಕೂ ಹೆಚ್ಚು ಮೌಲ್ಯದ ಮೀನುಗಳು ಸಿಗದಂತೆ ಮಾಡಿದ್ದಾರೆ’ ಎಂದು ದೂರಿದರು.
‘ಹಲವು ವರ್ಷಗಳಿಂದಲೂ ನೌಕಾದಳದ ಸಿಬ್ಬಂದಿ ಈ ರೀತಿ ಮೀನುಗಾರರಿಗೆ ಕಿರುಕುಳ ನೀಡುತ್ತಿದ್ದಾರೆ. ನೌಕಾನೆಲೆ ವ್ಯಾಪ್ತಿಯ ಹೊರಗೆ ಮೀನುಗಾರಿಕೆ ನಡೆಸುತ್ತಿದ್ದರೂ ಕಿರುಕುಳ ನಡೆಯುತ್ತಿದೆ. ಕೆಲವೊಮ್ಮೆ ಗಾಳಿಯ ರಭಸಕ್ಕೆ ಬಲೆಯು ನೌಕಾನೆಲೆ ವ್ಯಾಪ್ತಿಯ ಗಡಿಗೆ ಹೋಗಿದ್ದರೂ ಎಚ್ಚರಿಸದೆ ಏಕಾಏಕಿ ಕ್ರಮಕ್ಕೆ ಮುಂದಾಗುತ್ತಿದ್ದಾರೆ’ ಎಂದೂ ಆರೋಪಿಸಿದರು.
ಗಣಪತಿ ಮಾಂಗ್ರೆ, ಮಂಜುನಾಥ ಮುದಗೇಕರ, ಪ್ರಕಾಶ ಹರಿಕಂತ್ರ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.