ADVERTISEMENT

ಇಡೂರು, ಚೆಂಡಿಯಾದಲ್ಲಿ ಜಲ ದಿಗ್ಬಂಧನ

ರಭಸದ ಗಾಳಿಯೊಂದಿಗೆ ನಿರಂತರ ಮಳೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 14:14 IST
Last Updated 7 ಜುಲೈ 2024, 14:14 IST
ನಿರಂತರ ಮಳೆಯಿಂದಾಗಿ ಕಾರವಾರ ತಾಲ್ಲೂಕಿನ ಇಡೂರು ಗ್ರಾಮ ಜಲಾವೃತಗೊಂಡಿದೆ
ನಿರಂತರ ಮಳೆಯಿಂದಾಗಿ ಕಾರವಾರ ತಾಲ್ಲೂಕಿನ ಇಡೂರು ಗ್ರಾಮ ಜಲಾವೃತಗೊಂಡಿದೆ   

ಕಾರವಾರ: ಜಿಲ್ಲೆಯಾದ್ಯಂತ ಭಾನುವಾರವೂ ಬಿರುಸಿನ ಮಳೆ ಮುಂದುವರೆದಿದ್ದು ಹಲವೆಡೆ ಜಲಾವೃತ, ಸಂಚಾರ ವ್ಯತ್ಯಯದ ಸಮಸ್ಯೆಗಳು ತಲೆದೋರಿದವು.

ರಭಸದ ಗಾಳಿಯೂ ಇದ್ದ ಪರಿಣಾಮ ಮರ, ಮರದ ಟೊಂಗೆಗಳು ಮುರಿದು ಬಿದ್ದ ಘಟನೆಗಳು ನಡೆದವು. ಗಾಳಿಯ ವೇಗದ ಪರಿಣಾಮ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದರಿಂದ ಕಡಲತೀರಕ್ಕೆ ಆಳೆತ್ತರದ ಅಲೆಗಳು ಬಂದು ಅಪ್ಪಳಿಸಿದ್ದವು. ಇಲ್ಲಿನ ಟ್ಯಾಗೋರ್ ಕಡಲತೀರ, ದೇವಬಾಗ, ಮಾಜಾಳಿಯಲ್ಲಿ ಕಡಲ ಕೊರೆತದ ಆತಂಕ ಸೃಷ್ಟಿಯಾದವು.

ಶನಿವಾರ ರಾತ್ರಿಯಿಂದಲೂ ಸತತವಾಗಿ ಮಳೆ ಬಿದ್ದ ಪರಿಣಾಮ ತಾಲ್ಲೂಕಿನ ಚೆಂಡಿಯಾ, ಅರ್ಗಾ, ಇಡೂರು ಗ್ರಾಮಗಳಲ್ಲಿ ಜಲಾವೃತ ಸಮಸ್ಯೆ ತಲೆದೋರಿತು. ಇಡೂರು ಗ್ರಾಮದ ಸುತ್ತಲೂ ನೀರು ಆವರಿಸಿದ್ದರಿಂದ ಇಲ್ಲಿನ ಹತ್ತಕ್ಕೂ ಹೆಚ್ಚು ಮನೆಗಳ ನಿವಾಸಿಗಳು ಜಲದಿಗ್ಬಂಧನಕ್ಕೆ ಒಳಗಾದರು.

ADVERTISEMENT

‘ನೌಕಾನೆಲೆಯ ಒಳಗೆ ಸೇತುವೆ ಕಾಮಗಾರಿ ಸಲುವಾಗಿ ಮಳೆನೀರು ಹರಿದು ಹೋಗುವ ಕಾಲುವೆ ಮುಚ್ಚಿರುವ ಶಂಕೆ ಇದೆ. ಇದರಿಂದ ಮಳೆ ನೀರು ಹರಿದು ಸಾಗದೆ ಜಲಾವೃತ ಸಮಸ್ಯೆ ಸೃಷ್ಟಿಯಾಗುತ್ತಿದೆ’ ಎಂದು ಗ್ರಾಮಸ್ಥರು ದೂರಿದರು.

ಗೋಟೆಗಾಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಯರ್ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಸಂಪೂರ್ನ ಜಲಾವೃತಗೊಂಡಿತ್ತು. ಸಮೀಪದಲ್ಲಿನ ಹಳ್ಳ ಉಕ್ಕೇರಿದ್ದರಿಂದ ಗ್ರಾಮಸ್ಥರಿಗೆ ಸಂಚಾರಕ್ಕೆ ಸಮಸ್ಯೆ ಉಂಟಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.