ಕುಮಟಾ: ತಾಲ್ಲೂಕಿನ ವಾಲಗಳ್ಳಿ ಗ್ರಾಮ ಪಂಚಾಯಿತಿಯ ಹಾರೋಡಿ ಬಳಿ ಕುಮಟಾ-ಸಿದ್ದಾಪುರ ರಸ್ತೆ ಮಳೆ ನೀರಿನಿಂದ ಜಲಾವೃತಗೊಂಡ ಪರಿಸ್ಥಿತಿಯನ್ನು ಗುರುವಾರ ವೀಕ್ಷಿಸಿದ ತಹಶೀಲ್ದಾರ್ ಪ್ರವೀಣ ಕರಾಂಡೆ, ಮಳೆ ನೀರು ಸರಾಗವಾಗಿ ಹರಿದು ಹೋಗಲು ಕ್ರಮ ಕೈಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿಂದೆ ಸಮೀಪದ ಹೆಗಲೆ ರಸ್ತೆ ನಿರ್ಮಾಣ ಮಾಡುವಾಗ ದುರಸ್ತಿ ಕೈಗೊಳ್ಳದ ಮೋರಿಯನ್ನು ದುರಸ್ತಿ ಮಾಡುವಂತೆ ತಿಳಿಸಿ, ಅಲ್ಲಿ ಹೆಚ್ಚಿನ ಪ್ರಮಾಣದ ಮಳೆ ನೀರು ಹರಿದುಹೋಗಲು ಅವಕಾಶ ಕಲ್ಪಿಸುವಂತೆ ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಮೀಪದ ಸೋಕನಮಕ್ಕಿಯ ಕೆರೆಗೆ ಮಳೆ ನೀರು ಹರಿದು ಹೋಗುವಂತೆ ಕ್ರಮ ಕೈಕೊಳ್ಳಲು ಸೂಚಿಸಿದರು. ಮಳೆ ನೀರು ಸಂಗ್ರಹವಾಗುವ ರಸ್ತೆ ಬದಿಯ ಸಾರ್ವಜನಿಕರಿಗೆ ಮನವಿ ಮಾಡಿ ನೀರು ಹರಿದುಹೋಗಲು ಅವಕಾಶ ನೀಡುವಂತೆ ಮನವಿ ಮಾಡಿದರು.
‘ಗ್ರಾಮದಲ್ಲಿ ರಸ್ತೆ ಜಲಾವೃತಗೊಳ್ಳುವ ಪ್ರದೇಶಗಳಲ್ಲಿ ಮಳೆ ನೀರು ಸರಾಗ ಹರಿಯುವಂತೆ ಕ್ರಮ ಕೈಕೊಳ್ಳುವ ಉದ್ದೇಶದಿಂದ ಜುಲೈ 2ರಂದು ಸ್ಥಳೀಯ ಗ್ರಾಮ ಪಂಚಾಯಿತಿಯಲ್ಲಿ ಜನಪ್ರನಿಧಿಗಳ, ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಭೆ ಕರೆಯಲಾಗಿದೆ. ಎಲ್ಲರ ಅಭಿಪ್ರಾಯ ಆಲಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ಪಿ. ನಾಯ್ಕ, ವಾಲಗಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಿ ಮಡಿವಾಳ, ಉಪಾಧ್ಯಕ್ಷ ಸುಧಾಕರ ಗೌಡ, ಪಿಡಿಒ ವೀಣಾ ನಾಯ್ಕ, ಗ್ರೇಡ್-2 ತಹಶೀಲ್ದಾರ್ ಸತೀಶ ಗೌಡ, ಪಿ.ಎಸ್.ಐ ಮಂಜುನಾಥ ಗೌಡರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.