ದಾಂಡೇಲಿ: ಗಿಡವನ್ನು ನೆಟ್ಟರೆ ಸಾಲದು, ಅದರ ಸಂರಕ್ಷಣೆಯ ಜವಾಬ್ದಾರಿಯನ್ನು ಹೊರಬೇಕು. ದಿನೇ ದಿನೇ ಪರಿಸರದ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಜೀವ ಸಂಕುಲದ ಉಳಿವು ಜರೂರಾಗಿ ಆಗಬೇಕಿದೆ’ ಎಂದು ದಾಂಡೇಲಿ ಉಪ ವಲಯ ಅರಣ್ಯಾಧಿಕಾರಿ ಸಂದೀಪ್ ನಾಯಕ ಹೇಳಿದರು.
ಹಳೇ ದಾಂಡೇಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.
‘ಅರಣ್ಯ ಇಲಾಖೆ ಪ್ರತಿ ವರ್ಷ ಅರಣ್ಯ ರಕ್ಷಣೆ ಹಾಗೂ ಅರಣ್ಯ ಬೆಳೆಸಲು ತನ್ನ ಶಕ್ತಿ ಮೀರಿ ಕೆಲಸ ಮಾಡುತ್ತಿದೆ. ಇಂತಹ ಕೆಲಸಗಳಿಗೆ ಸಾರ್ವಜನಿಕರ ಸಹಭಾಗಿತ್ವವು ಬೇಕಾಗುತ್ತದೆ. ವಿದ್ಯಾರ್ಥಿಗಳಿಗೆ ಪರಿಸರ ಪ್ರಜ್ಞೆ ಬೆಳೆದಷ್ಟು ಪರಿಸರ ಸಂರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು’ ಎಂದರು.
ರಸಾಯನಶಾಸ್ತ್ರ ವಿಷಯದ ಉಪನ್ಯಾಸಕಿ ಪೂರ್ಣಿಮಾ ಬೆಳವಡಿ ಪ್ಲಾಸ್ಟಿಕ್ ಬಳಕೆಯಿಂದಾಗಿ ಪರಿಸರ ಮೇಲೆ ಆಗುತ್ತಿರುವ ದುಷ್ಪರಿಣಾಮ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾಲೇಜಿನ ಪ್ರಾಚಾರ್ಯೆ ನಾಗರೇಖಾ ಗಾಂವ್ಕರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಪರಿಸರದ ಮೇಲೆ ಮಾನವ ಕುಕೃತ್ಯದಿಂದಾಗುವ ದುಷ್ಪರಿಣಾಮ ಬಗ್ಗೆ ತಿಳಿ ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯೆ ಸಪೂರಾಬಿ ಯರಗಟ್ಟಿ, ಉಪನ್ಯಾಸಕರಾದ ಸುಮಂಗಲಾ ನಾಯಕ, ಮಂಜುಳಾ ಭಾವಿಕಟ್ಟಿ, ಅನುಷಾ ಅಂಕೋಲೆಕರ, ವಿದ್ಯಾ ಉಪ್ಪಾರ, ಉಷಾ ಸರಗಾಂವಕರ, ಅರಣ್ಯ ವೀಕ್ಷಕರಾದ ಚಂದ್ರಕಾಂತ ದೇಸಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.