ಮುಂಡಗೋಡ: ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿಯಿಂದ ₹ 50 ಸಾವಿರ ಹಾಕಿಸಿಕೊಂಡು, ವಂಚಿಸಿದ ಆರೋಪದ ಮೇಲೆ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಸ್ವೀಪರ್ ಕೆಲಸ ಮಾಡುವ ಸಿಬ್ಬಂದಿ ರಾಜು ಕೃಷ್ಣಪ್ಪ ಅರಮನಿ ಎಂಬಾತನಿಗೆ ಇಲ್ಲಿನ ಜೆಎಂಎಫ್ಸಿ ನ್ಯಾಯಾಲಯ ಶನಿವಾರ ಎರಡು ವರ್ಷ ಕಾರಾಗೃಹ ವಾಸ ಹಾಗೂ ₹ 10 ಸಾವಿರ ದಂಡ ವಿಧಿಸಿ ಆದೇಶಿಸಿದೆ.
2014ರಲ್ಲಿ ಇಲ್ಲಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಆಗಿ ಕೆಲಸ ಮಾಡುತ್ತಿದ್ದ ಅಶೋಕ ಭಟ್ಟ ಮೇಲೆ ಲೋಕಾಯುಕ್ತ ದಾಳಿ ನಡೆದಿತ್ತು. ಈ ಪ್ರಕರಣವನ್ನು ದುರುಪಯೋಗಪಡಿಸಿಕೊಂಡು ಧಾರವಾಡ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಆಗಿದ್ದ ಮುರುಗೇಶ ಕುಂಬಾರ, ತಾನೇ ಲೋಕಾಯುಕ್ತ ಅಧಿಕಾರಿ ಎಂದು ಎಸಿಎಫ್ ಅಶೋಕ ಭಟ್ಟ ಅವರಿಗೆ ಸುಳ್ಳು ಹೇಳಿ, ಪ್ರಕರಣದಲ್ಲಿ ಬಿ ರಿಪೋರ್ಟ್ ಹಾಕಲು ₹ 50 ಸಾವಿರ ಬೇಡಿಕೆ ಇಟ್ಟು, ಹಣ ಪಡೆದುಕೊಂಡಿದ್ದ. ಈ ಕಾನೂನುಬಾಹಿರ ಕೃತ್ಯಕ್ಕೆ ಕೇಂದ್ರ ಕಾರಾಗೃಹದ ಸ್ವೀಪರ್ ಕೆಲಸದ ಸಿಬ್ಬಂದಿ ರಾಜು ಕೃಷ್ಣಪ್ಪ ಅರಮನಿ ಅಗತ್ಯ ಸಹಾಯ ಮಾಡಿರುವ ಆರೋಪ ಸಾಬೀತು ಆಗಿರುವುದರಿಂದ, ನ್ಯಾಯಾಧೀಶ ವಿನೋದ ಎಲ್. ಬಾಳಾನಾಯಕ ಅವರು ಆರೋಪಿಗೆ ಎರಡು ವರ್ಷ ಕಾರಾಗೃಹ ವಾಸ ಹಾಗೂ ₹10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಆಗಿನ ಸಿಪಿಐ ಹುಸೇನಖಾನ ಪಠಾಣ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಸಲ್ಲಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕ ಪ್ರಸಾದ ರಮೇಶ ಹೆಗಡೆ ವಾದ ಮಂಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.