ADVERTISEMENT

ದಾಂಡೇಲಿ: ಗುಣಮಟ್ಟದ ಶಿಕ್ಷಣ ನೀಡುವ ಸರ್ಕಾರಿ ಕಾಲೇಜು

​ಪ್ರಜಾವಾಣಿ ವಾರ್ತೆ
Published 20 ಮೇ 2024, 6:06 IST
Last Updated 20 ಮೇ 2024, 6:06 IST
ದಾಂಡೇಲಿಯ ಅಂಬೇವಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಕ್ಷಿ ನೋಟ.
ದಾಂಡೇಲಿಯ ಅಂಬೇವಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಕ್ಷಿ ನೋಟ.   

ದಾಂಡೇಲಿ: ಖಾಸಗಿ ಕಾಲೇಜಿಗೆ ಸವಾಲು ಹಾಕುವಂತೆ ಮೂಲ ಸೌಕರ್ಯ ಹೊಂದಿರುವ ದಾಂಡೇಲಿಯ ಅಂಬೇವಾಡಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಗುಣಮಟ್ಟದ ಶಿಕ್ಷಣ ನೀಡುವತ್ತ ಲಕ್ಷ್ಯ ವಹಿಸಿದೆ.

ಹತ್ತು ವರ್ಷಗಳ ಹಿಂದೆ ಸ್ಥಾಪನೆಯಾದ ಕಾಲೇಜು ಮೊದಲು ನಗರಸಭೆಯ ಹಳೆ ಕಟ್ಟಡದಲ್ಲಿತ್ತು. 23 ವಿದ್ಯಾರ್ಥಿಗಳ ಪ್ರವೇಶಾತಿಯೊಂದಿಗೆ ಆರಂಭಗೊಂಡ ಕಾಲೇಜಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ 514 ವಿದ್ಯಾರ್ಥಿಗಳಿದ್ದಾರೆ.

ಬಿ.ಎ, ಬಿ.ಕಾಂ, ಬಿ.ಎಸ್‍ಸಿ ತರಗತಿಗಳನ್ನು ಹೊಂದಿರುವ ಕಾಲೇಜಿನಲ್ಲಿ 2023 ರಲ್ಲಿ ಬಿ.ಸಿ.ಎ ವಿಭಾಗವನ್ನೂ ಆರಂಭಿಸಲಾಗಿದೆ. ಸುಸಜ್ಜಿತ ಪ್ರಯೋಗಾಲಯ, ಅಗತ್ಯದಷ್ಟು ತರಗತಿ ಕೊಠಡಿ, ಎರಡು ಕಂಪ್ಯೂಟರ್ ಲ್ಯಾಬ್, ವಿದ್ಯಾರ್ಥಿ ವಿಶ್ರಾಂತಿ ಗೃಹ ಸೇರಿ ಹಲವು ಮೂಲ ಸೌಲಭ್ಯಗಳನ್ನು ಹೊಂದಿದೆ.

ADVERTISEMENT

2023-24 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಉಷಾ ಯೋಜನೆ ಅಡಿ ದಾಂಡೇಲಿಯ ಕಾಲೇಜು ಆಯ್ಕೆ ಆಗಿದ್ದು ₹ 5 ಕೋಟಿ ಅನುದಾನವನ್ನು ಪಡೆದಿದೆ. ಕಾಲೇಜಿನಲ್ಲಿ 12 ಕಾಯಂ ಉಪನ್ಯಾಸಕರು ಹಾಗೂ 22 ಅತಿಥಿ ಉಪನ್ಯಾಸಕರನ್ನು ಹೊಂದಿದೆ.

ವಿದ್ಯಾರ್ಥಿಗಳಿಗಾಗಿ ಕೌನ್ಸೆಲಿಂಗ್ ಸೆಲ್ ಮೂಲಕ ಆತ್ಮವಿಶ್ವಾಸ ಹೆಚ್ಚಿಸುವ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಲಾಗುತ್ತದೆ. 7,500 ಪುಸ್ತಕ ಹೊಂದಿರುವ ಗ್ರಂಥಾಲಯ 6 ಕಂಪ್ಯೂಟರ್ ಹೊಂದಿರುವ ಡಿಜಿಟಲ್ ಗ್ರಂಥಾಲಯ ‌ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ವಿಭಾಗವನ್ನೂ ಹೊಂದಿದೆ.

ಕಾಲೇಜು ಆವರಣದಲ್ಲಿ ಶುಶ್ರೂಷ ಔಷಧ ವನ ಹಾಗೂ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಲಾಗಿದೆ. ಸುಮಾರು 50 ವಿಧದ ಮರಗಳು ಹಾಗೂ 150 ಕ್ಕೂ ಹೆಚ್ಚಿನ ಔಷಧ ಸಸ್ಯಗಳನ್ನು ಬೆಳಸಲಾಗಿದೆ. ಇವುಗಳ ನಿರ್ವಹಣೆಗೆ ವಿದ್ಯಾರ್ಥಿಗಳ ತಂಡ ರಚಿಸಿ ಪ್ರತಿ ವರ್ಷ ಉತ್ತಮ ನಿರ್ವಹಣೆ ಮಾಡಿದ ತಂಡಕ್ಕೆ ಬಹುಮಾನ ವಿತರಣೆ ಮಾಡುವ ಪದ್ಧತಿ ಹೊಂದಿದೆ. ಕಾಲೇಜು ಕ್ಯಾಂಪಸ್ ಸದಾ ಹಸಿರಿನಿಂದ ಕಂಗೊಳಿಸುವಂತೆ ಮಾಡಲಾಗಿದೆ. ಇದರೊಂದಿಗೆ ನಾಲ್ಕಾರು ಮರಗಳ ಕೆಳಗೆ ನಾಲ್ಕು ಬೆಂಚಿನ ಓಪನ್ ಲೈಬ್ರರಿ ಮಾಡಲಾಗಿದೆ’ ಎನ್ನುತ್ತಾರೆ ಪ್ರಾಚಾರ್ಯ ಎಂ.ಡಿ. ಒಕ್ಕುಂದ.ವಿದ್ಯಾರ್ಥಿ ಭೌದ್ಧಿಕ ಹಾಗೂ ಸ್ಪರ್ಧಾತ್ಮಕ ಯುಗಕ್ಕೆ ಹೊಂದಿಕೊಳ್ಳುವಂತೆ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉತ್ತಮ ಆಯ್ಕೆ ಎಂ.ಡಿ. ಒಕ್ಕುಂದ ಪ್ರಾಚಾರ್ಯ ದಾಂಡೇಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು

ಕಾಲೇಜಿನ ಮೈದಾನ ಹಾಗೂ ಕಾಲೇಜಿನ ಪ್ರವೇಶ ದ್ವಾರ.
ಕಾಲೇಜಿನ ಕ್ಯಾಂಪಸ್ ನಲ್ಲಿ ವಿದ್ಯಾರ್ಥಿಗಳಿಂದ ನಿರ್ವಹಣೆ ಮಾಡುತ್ತಿರುವ ಔಷದಿ ಉದ್ಯಾನವನ.ಮತ್ತು ಮಳೆ ನೀರು ಕೊಯ್ಲು ವ್ಯವಸ್ಥೆ.
ವಿದ್ಯಾರ್ಥಿ ಭೌದ್ಧಿಕ ಹಾಗೂ ಸ್ಪರ್ಧಾತ್ಮಕ ಯುಗಕ್ಕೆ ಹೊಂದಿಕೊಳ್ಳುವಂತೆ ಶಿಕ್ಷಣ ನೀಡುವುದು ನಮ್ಮ ಕರ್ತವ್ಯ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉತ್ತಮ ಆಯ್ಕೆ
ಎಂ.ಡಿ. ಒಕ್ಕುಂದ ಪ್ರಾಚಾರ್ಯ ದಾಂಡೇಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಕಾಲೇಜಿಗೆ ಇನ್ನೇನು ಬೇಕು?
‘ವಿಜ್ಞಾನ ವಿಭಾಗದಲ್ಲಿ ಕಂಪ್ಯೂಟರ್ ವಿಜ್ಞಾನ ಭೌತಶಾಸ್ತ್ರ ಗಣಿತಶಾಸ್ತ್ರ ವಿಷಯಗಳಿಗೆ ಪೂರ್ಣಾವಧಿ ಬೋಧಕರ ಅಗತ್ಯವಿದೆ. ಎಂ.ಎ. ಎಂ.ಕಾಂ ಎಂ.ಎಸ್‍ಸಿ ಕೋರ್ಸ್‍ಗಳನ್ನು ಆರಂಭಿಸಿದರೆ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಧಾರವಾಡಕ್ಕೆ ತೆರಳುವುದು ತಪ್ಪಲಿದೆ’ ಎನ್ನುತ್ತಾರೆ ವಿದ್ಯಾರ್ಥಿಗಳು ಮತ್ತು ಪಾಲಕರು. ‘ಬೆಳಿಗ್ಗೆಯಿಂದ ಕಾಲೇಜು ಪ್ರಾರಂಭವಾಗುವ ಕಾರಣಕ್ಕೆ ದೂರದ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಉಪಾಹಾರಕ್ಕಾಗಿ ಕ್ಯಾಂಟೀನ್ ಸೌಲಭ್ಯ ಅಗತ್ಯವಿದೆ. ಕೇಂದ್ರ ಬಸ್ ನಿಲ್ದಾಣದಿಂದ ಕಾಲೇಜಿಗೆ ಬಸ್ ಸಂಚಾರ ಒದಗಿಸಬೇಕು. ಸುತ್ತಿ ಬಳಸಿ ಕಾಲೇಜಿಗೆ ಬರಬೇಕು ಮುಖ್ಯ ರಸ್ತೆಯಿಂದ ಒಂದು ಕಿ.ಮೀ ದೂರದಲ್ಲಿರುವ ಕಾರಣ ಮುಖ್ಯ ದ್ವಾರಕ್ಕೆ ನೇರ ಮಾರ್ಗವನ್ನು ಕಲ್ಪಿಸಬೇಕು’ ಎಂದೂ ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.