ಹಳಿಯಾಳ: ‘ಕಲ್ಯಾಣ ರಾಜ್ಯ ಎಂಬುದು ಸರ್ವ ಜನಾಂಗದ ಶಾಂತಿಯ ತೋಟವಾಗಬೇಕು. ಕಾವ್ಯ ರಚನೆಯ ಮೂಲಕ ಕಲ್ಯಾಣ ರಾಜ್ಯ ನಿರ್ಮಾಣವಾಗಬೇಕು. ರಾಜ ಮಾರ್ಗವು ಸಾಂಸ್ಕೃತಿಕ ಅಂತಃಕರಣದಿಂದ ಕೂಡಿರಬೇಕು’ ಎಂದು ಸಾಹಿತ್ಯ ಅಕಾಡೆಮಿಯ ಸಾಮಾನ್ಯ ಸಲಹಾ ಮಂಡಳಿಯ ಸದಸ್ಯರಾದ ಶ್ರೀಧರ ಬಳಿಗಾರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾಹಿತ್ಯ ಅಕಾಡೆಮಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಯೋಗದಲ್ಲಿ ಮಂಗಳವಾರ ನಡೆದ ಕಾವ್ಯ ಮತ್ತು ಕಲ್ಯಾಣ ರಾಜ್ಯ ಸಾಹಿತ್ಯ ವೇದಿಕೆ ಕಾರ್ಯಕ್ರಮದಲ್ಲಿ ‘ಕಾವ್ಯದಲ್ಲಿ ರಾಜಕೀಯ ಪ್ರಜ್ಞೆ’ ಕುರಿತು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ನಾಗರೇಖಾ ಗಾಂವಕರ, ‘ಕನ್ನಡ ಕಾವ್ಯದ ಇತ್ತೀಚಿನ ಪ್ರವೃತ್ತಿಗಳು’ ಕುರಿತು ಮಾತನಾಡಿ, ಕಾವ್ಯ ಶ್ರೇಷ್ಠತೆಯ ವ್ಯಸನವನ್ನು ಕಡಿಮೆ ಮಾಡಬೇಕು. ಕಾವ್ಯ ನಿರ್ದಿಷ್ಟ ಮಾರ್ಗದಲ್ಲಿ ರಚನೆಯಾಗಬೇಕು ಎಂದರು.
ಪ್ರಾಚಾರ್ಯ ಚಂದ್ರಶೇಖರ್ ಲಮಾಣಿ ಅಧ್ಯಕ್ಷತೆ ವಹಿಸಿ, ಚನ್ನಪ್ಪ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಅಧ್ಯಕ್ಷ ಸುಮಂಗಲಾ ಅಂಗಡಿ, ಕನ್ನಡ ಬರಹಗಾರರಾದ ಮಾರ್ತಾಂಡಪ್ಪ ಕತ್ತಿ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ವಿದ್ಯಾರ್ಥಿನಿ ಗಾಯತ್ರಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ರಾಮಕೃಷ್ಣ ಗೌಡ ಸ್ವಾಗತಿಸಿದರು. ಉಪನ್ಯಾಸಕ ಪ್ರಹ್ಲಾದ ಘಾಡಿ ವಂದಿಸಿದರು. ಡಾ. ಅನ್ನಪೂರ್ಣ ಪಾಟೀಲ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.