ಶಿರಸಿ: ತಾಲ್ಲೂಕಿನಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಉತ್ತಮ ಮಳೆ ಸುರಿದಿದ್ದು, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವರುಣನ ಆರ್ಭಟ ಮುಂದುವರಿದಿದೆ.
ತಾಲ್ಲೂಕಿನಲ್ಲಿ ಸುರಿಯುತ್ತಿರುವ ಸತತ ಮಳೆಗೆ ಅಘನಾಶಿನಿ, ಶಾಲ್ಮಲಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಿದೆ. ತೊರೆಗಳು ಮತ್ತೆ ಭೋರ್ಗರೆಯುತ್ತಿವೆ. ಅರಣ್ಯ ಪ್ರದೇಶದಲ್ಲಿ ಜಲಮೂಲಗಳು ಭರ್ತಿಯಾಗುತ್ತಿವೆ. ಪೂರ್ವಭಾಗವಾದ ಬನವಾಸಿ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ವರದಾ ನದಿಯಲ್ಲಿ ಒಳಹರಿವು ಹೆಚ್ಚುತ್ತಿದ್ದು, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆಶಾಭಾವ ಮೂಡಿದೆ.
ಮಳೆ ಹಾನಿ:
ಮಳೆಗೆ ಶಿವಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಧರೆಗೆ ಹಾಕಿದ ಪಿಚಿಂಗ್ ಕುಸಿದು ಹಾನಿಯಾಗಿದೆ. ಹೀಗೆ ಮಳೆ ಮುಂದುವರೆದಲ್ಲಿ ಶಾಲಾ ಕಟ್ಟಡದ ಗೋಡೆಗಳು ಕುಸಿಯುವ ಸಂಭವವಿದೆ. ನಗರಸಭೆ ವ್ಯಾಪ್ತಿಯ ಗಣೇಶನಗರದ ರೂಪಾ ಅವಘನ ಅವರ ಮನೆಯ ಹಿಂದಿರುವ ತಡೆಗೋಡೆ ಕುಸಿದು ಬಿದ್ದಿದೆ. ಹನುಮಂತಿ ಗ್ರಾಮದ ಅಮಿನಾಬಿ ಅಹಮದ್ ಖಾನ್ ಅವರ ವಾಸ್ತವ್ಯದ ಮನೆಯ ಮಾಡು ಮುರಿದು ಬಿದ್ದು ಅಲ್ಪ ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.