ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ಗುರುವಾರ ನಸುಕಿನಿಂದ ಕೆಲ ಗಂಟೆ ನಿರಂತರ ಮಳೆ ಸುರಿದಿದ್ದರಿಂದ ಅಘನಾಶಿನಿ ನದಿ ಸೇರಿ ಹಲವು ಉಪನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಘಟ್ಟದ ಮೇಲಿನ ಸಿದ್ದಾಪುರ, ಶಿರಸಿ ಭಾಗದಲ್ಲಿ ಮಳೆ ಸುರಿದಿದ್ದರಿಂದ ಅಘನಾಶಿನಿ ನದಿಯ ಉಪನದಿ ಚಂಡಿಕಾ ಉಕ್ಕೇರಿ ಹರಿಯಿತು. ಕುಮಟಾ ತಾಲ್ಲೂಕಿನ ಕತಗಾಲ ಬಳಿ ರಾಷ್ಟ್ರೀಯ ಹೆದ್ದಾರಿ–766 ಜಲಾವೃತಗೊಂಡು ಸುಮಾರು 6 ಗಂಟೆಗೂ ಹೆಚ್ಚು ಹೊತ್ತು ಸಂಚಾರ ಸ್ಥಗತಗೊಂಡಿತ್ತು. ರಸ್ತೆಯಲ್ಲಿ ಸಿಲುಕಿದ್ದವರನ್ನು ದೋಣಿ ಬಳಸಿ ದಾಟಿಸಲಾಯಿತು. ಖಾಸಗಿ ಬಸ್ ನೀರಿನಲ್ಲೇ ಸಿಲುಕಿಕೊಂಡು, ಮುಂದೆ ಸಾಗಲು ಸಾಧ್ಯವಾಗಲಿಲ್ಲ.
ಹೊನ್ನಾವರ ತಾಲ್ಲೂಕಿನ ಭಾಸ್ಕೇರಿ ಸಮೀಪ ಹೊನ್ನಾವರ–ಸಾಗರ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–69 ರಲ್ಲಿ ಗುಡ್ಡ ಕುಸಿದು ಕೆಲ ಗಂಟೆ ಸಂಚಾರ ಸ್ಥಗಿತವಾಗಿತ್ತು. ಶಿರಸಿಯಲ್ಲಿ ಮಳೆಯಿಂದ ಮನೆಯ ಚಾವಣಿ ಕುಸಿದು ಲಕ್ಷಾಂತರ ಮೊತ್ತದ ಹಾನಿ ಸಂಭವಿಸಿದೆ.
ಗುಂಡಬಾಳ ನದಿಯು ಉಕ್ಕೇರಿದ್ದರಿಂದ ಹರಿಜನಕೇರಿ, ಹಿತ್ತಲಕೇರಿ ಗ್ರಾಮಸ್ಥರನ್ನು ಮತ್ತು ಅಂಕೋಲಾ ತಾಲ್ಲೂಕಿನಲ್ಲಿ ಗಂಗಾವಳಿ ನದಿ ಉಕ್ಕಿದ್ದರಿಂದ ಬಿಳಿಹೊಯ್ಗಿ, ಶಿಂಗನಮಕ್ಕಿ, ಹಡವ ಗ್ರಾಮದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ಕುಮಟಾ ಮತ್ತು ಹೊನ್ನಾವರದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.