ಕಾರವಾರ: ‘ಜಿಲ್ಲೆಯಲ್ಲಿ ಮಂಗನ ಕಾಯಿಲೆ ನಿಯಂತ್ರಣಕ್ಕೆ ಬರುತ್ತಿದ್ದು, 41 ಸೋಂಕಿತರ ಪೈಕಿ 37 ಮಂದಿ ಗುಣಮುಖಗೊಂಡಿದ್ದಾರೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ್ ಬಿ.ವಿ ಹೇಳಿದರು.
ಇಲ್ಲಿನ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರೋಗ್ಯ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಶಿರಸಿಯಲ್ಲಿ ಕೆ.ಎಫ್.ಡಿ ಪತ್ತೆ ಪ್ರಯೋಗಾಲಯ ಆರಂಭಿಸಲು ಅಂತಿಮ ಹಂತದ ಪ್ರಕ್ರಿಯೆಗಳು ನಡೆಯುತ್ತಿವೆ. ಸರ್ಕಾರ ಅನುಮತಿಸಿದ ತಕ್ಷಣ ಪ್ರಯೋಗಾಲಯ ಆರಂಭಗೊಳ್ಳಲಿದೆ’ ಎಂದರು.
‘ಕ್ರಿಮ್ಸ್ ನಲ್ಲಿ ಟ್ರಾಮಾ ಸೆಂಟರ್, ಕ್ಯಾನ್ಸರ್ ಚಿಕಿತ್ಸೆ ವಿಭಾಗ ಸೇರಿದಂತೆ ಸೂಪರ್ ಸ್ಪೆಶಾಲಿಟಿ ಸೌಲಭ್ಯಗಳು ಶೀಘ್ರದಲ್ಲಿ ಜಾರಿಯಾಗುವ ನಿರೀಕ್ಷೆ ಇದೆ. ಜಿಲ್ಲೆಯಲ್ಲಿ ಸಾಂಕ್ರಾಮಿಕ ಕಾಯಿಲೆಗಳನ್ನು ಹತೋಟಿಗೆ ತರಲಾಗಿದೆ’ ಎಂದರು.
ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಡಾ.ಅನ್ನಪೂರ್ಣ ವಸ್ತ್ರದ್, ಡಾ.ಕ್ಯಾಪ್ಟನ್ ರಮೇಶ ರಾವ್, ಡಾ.ಶಂಕರ ರಾವ್, ಡಾ.ನಟರಾಜ ಕೆ., ಡಾ.ಹರ್ಷ ಉಪನ್ಯಾಸ ನೀಡಿದರು.
ಪತ್ರಿಕಾ ಭವನ ನಿರ್ವಹಣಾ ಸಮಿತಿ ಅಧ್ಯಕ್ಷ ಟಿ.ಬಿ.ಹರಿಕಾಂತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಪತ್ರಕರ್ತರಾದ ಸಂದೀಪ ಸಾಗರ ಎಂ.ವಿ, ಗಣಪತಿ ಹೆಗಡೆ, ಇತರರು ಪಾಲ್ಗೊಂಡಿದ್ದರು.
‘ಸರ್ವಜ್ಞನ ತ್ರಿಪದಿ ಸಾರ್ವಕಾಲಿಕ’ ಕಾರವಾರ: ‘ಸಮಾಜದಲ್ಲಿನ ಕೆಟ್ಟ ವಿಚಾರಗಳನ್ನು ಹೋಗಲಾಡಿಸಿ ಉತ್ತಮ ವಿಚಾರಧಾರೆಗೆ ಸರ್ವಜ್ಞ ತ್ರಿಪದಿಗಳ ಮೂಲಕ ಸಂದೇಶ ನೀಡಿದ್ದಾರೆ. ಅವರ ಸಂದೇಶಗಳು ಸಾರ್ವಕಾಲಿಕ’ ಎಂದು ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಪೂಜಾರ ಹೇಳಿದರು. ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂತ ಸರ್ವಜ್ಞ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳುವ ಬಗೆಯನ್ನು ಚುಟುಕಾದ ಸಾಲುಗಳಲ್ಲಿ ಪರಿಣಾಮಕಾರಿಯಾಗಿ ವಿವರಿಸಿದ್ದ ಸರ್ವಜ್ಞ ಸಮಾಜದ ಹಲವು ಅನಿಷ್ಟ ಪದ್ಧತಿ ಮೌಢ್ಯಗಳನ್ನು ಕಟುವಾಗಿ ಖಂಡಿಸಿದ್ದರು’ ಎಂದರು. ಶಿಕ್ಷಕ ಗಣೇಶ್ ಬಿಷ್ಟಣ್ಣನವರ ಉಪನ್ಯಾಸ ನೀಡಿದರು. ಹಲವು ಅಧಿಕಾರಿಗಳು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.