ಯಲ್ಲಾಪುರ: ‘ನಾಡಪ್ರಭು ಕೆಂಪೇಗೌಡರು ಅಪಾರ ದೂರದೃಷ್ಟಿಯುಳ್ಳ ನಾಯಕರಾಗಿದ್ದರು’ ಎಂದು ತಹಶೀಲ್ದಾರ್ ಅಶೋಕ ಭಟ್ ಹೇಳಿದರು.
ತಾಲ್ಲೂಕು ಆಡಳಿತ ಪಟ್ಟಣದ ಕಾಳಮ್ಮನಗರ ಸರ್ಕಾರಿ ಪ್ರೌಢಶಾಲೆಯಲ್ಲಿ ಗುರುವಾರ ಆಯೋಜಿಸಿದ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
‘ವಾಸ್ತುಶಿಲ್ಪ, ನೀರಾವರಿ ವ್ಯವಸ್ಥೆ, ಸಂಸ್ಕೃತಿ ರಕ್ಷಣೆ ಮುಂತಾದ ವಿಷಯದಲ್ಲಿ ಅವರ ಕೊಡುಗೆ ಮಹತ್ವದ್ದು’ ಎಂದರು.
ವಿಶ್ವದರ್ಶನ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ದತ್ತಾತ್ರೇಯ ಗಾಂವ್ಕರ ಕೆಂಪೇಗೌಡರ ಕುರಿತು ಉಪನ್ಯಾಸ ನೀಡಿ, ‘ಕೆಂಪೇಗೌಡರು ನೂರಾರು ಕೆರೆ, ಉದ್ಯಾನ ನಿರ್ಮಿಸಿದರು. ಶುದ್ಧವಾದ ನೀರಿನ ಅಗತ್ಯತೆಯ ಕುರಿತು ಅವರು ಆ ಸಂದರ್ಭದಲ್ಲಿಯೇ ಆಲೋಚಿಸಿದ್ದರು. ನಮ್ಮ ಸುತ್ತಲಿನ ಜಲಮೂಲಗಳನ್ನು ರಕ್ಷಿಸಲು ನಾವು ಅವರಿಂದ ಪ್ರೇರಣೆ ಪಡೆಯಬೇಕಿದೆ’ ಎಂದರು.
ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿದ್ಯಾರ್ಥಿನಿ ಶ್ರೀರಕ್ಷಾ ವೆರ್ಣೆಕರ ಮಾತನಾಡಿದರು. ಗ್ರೇಡ್ 2 ತಹಶೀಲ್ದಾರ್ ಸಿ.ಜಿ ನಾಯ್ಕ, ಭೂಮಾಪನ ಇಲಾಖೆಯ ವನಿತಾ ಪಾಟೀಲ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ದಾಕ್ಷಾಯಣಿ ನಾಯಕ ಇದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್ ಹೆಗಡೆ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯಶಿಕ್ಷಕ ನಾರಾಯಣ ನಾಯಕ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.