ಕುಮಟಾ: ‘ಶ್ರೀರಾಮ ಕಾಲ್ಪನಿಕ ವ್ಯಕ್ತಿ ಎಂದು ಸುಪ್ರೀಂ ಕೋರ್ಟ್ಗೆ ಪ್ರಮಾಣ ಪತ್ರ ನೀಡಿದ್ದ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಅವರು ಈಗ ಕಂಗಾಲಾಗಿ ಜೈ ಶ್ರೀರಾಮ ಎನ್ನುವಷ್ಟರ ಮಟ್ಟಿಗೆ ರಾಮ ಭಕ್ತರು ಅವರನ್ನು ಬದಲಾಯಿಸಿದ್ದಾರೆ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಮಟಾದಲ್ಲಿ ಸೋಮವಾರ ನಡೆದ ಬಿಜೆಪಿ ಜಿಲ್ಲಾ ಘಟಕದ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಕಾಂತರಾಜ ವರದಿಯನ್ನು ಅಂಗೀಕರಿಸುತ್ತೇನೆ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ತಾನು ದಲಿತ ಪರ ಎಂದು ತೋರಿಸಿಕೊಳ್ಳುತ್ತಿದ್ದಾರೆ. ಉನ್ನತ ಶಿಕ್ಷಣ ಪಡೆಯುತ್ತಿರುವ ಹಿಂದುಳಿದ ವರ್ಗಗಳ ಯಾವುದೇ ವಿದ್ಯಾರ್ಥಿಗಳಿಗೆ ಸರ್ಕಾರದ ಯಾವ ಶಿಷ್ಯ ವೇತನವೂ ಈಗ ಸಿಗುತ್ತಿಲ್ಲ’ ಎಂದು ದೂರಿದರು.
ಶಾಸಕ ದಿನಕರ ಶೆಟ್ಟಿ, ‘ಪಕ್ಷದ ರಾಜ್ಯ ಮಟ್ಟದ ಎಲ್ಲ ಸಭೆಗಳಿಗೆ ಹಾಜರಾಗಿ ಸಂಘಟನೆ ಮಾಡುತ್ತಿದ್ದ ಬಿಜೆಪಿ ಹಿಂದಿನ ಅಧ್ಯಕ್ಷ ವೆಂಕಟೇಶ ನಾಯಕ ಹಾಗೂ ನೂತನ ಅಧ್ಯಕ್ಷ ಎನ್.ಎಸ್. ಹೆಗಡೆ ಜೋಡೆತ್ತಿನಂತೆ ಪಕ್ಷಕ್ಕಾಗಿ ದುಡಿದಿದ್ದಾರೆ’ ಎಂದರು.
ಮುಖಂಡ ಹರಿಪ್ರಕಾಶ ಕೋಣೆಮನೆ, ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬೋಗಸ್ ಎನ್ನುವುದು ಸಾಬೀತಾಗುತ್ತಿದೆ. ಈಗ ವಿಧಾನಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ನೆಲ ಕಚ್ಚಿ ಬಿಜೆಪಿ ಆಯ್ಕೆಯಾಗುತ್ತದೆ’ ಎಂದರು.
ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಮಾಜಿ ಶಾಸಕ ಸುನಿಲ ಹೆಗಡೆ ಮಾತನಾಡಿದರು. ಮಾಜಿ ಶಾಸಕರಾದ ವಿವೇಕಾನಂದ ವೈದ್ಯ, ಸುನಿಲ ನಾಯ್ಕ, ರೂಪಾಲಿ ನಾಯ್ಕ, ಮುಖಂಡರಾದ ಶಶಿಭೂಷಣ ಹೆಗಡೆ, ಕೆ.ಜಿ.ನಾಯ್ಕ, ಗೋವಿಂದ ನಾಯ್ಕ, ಎಂ.ಜಿ.ನಾಯ್ಕ, ತಾಲ್ಲೂಕು ಘಟಕ ಅಧ್ಯಕ್ಷ ಹೇಮಂತ ಗಾಂವ್ಕರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.