ADVERTISEMENT

ಉ.ಕನ್ನಡ|ಮತದಾನ ಮಾಡಲು ಬರುವವವರಿಗೆ ಉಚಿತ ವಿಮಾನ ಟಿಕೆಟ್ ಘೋಷಿಸಿದ ಮುಸ್ಲಿಂ ಜಮಾತೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2024, 12:31 IST
Last Updated 29 ಏಪ್ರಿಲ್ 2024, 12:31 IST
ಲೋಕಸಭಾ ಚುನಾವಣೆ 
ಲೋಕಸಭಾ ಚುನಾವಣೆ    

ಭಟ್ಕಳ: ಮೇ 7ರಂದು ನಡೆಯುವ ಉತ್ತರ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಗಲ್ಫ್ ರಾಷ್ಟ್ರದಿಂದ ಭಾರತಕ್ಕೆ ಬರುವ ಭಟ್ಕಳ ಜನರಿಗೆ ಉಚಿತ ವಿಮಾನ ಟಿಕೆಟ್ ನೀಡುವುದಾಗಿ ಭಟ್ಕಳದ ವಿವಿಧ ಮುಸ್ಲಿಂ ಜಮಾತೆಗಳು ಪ್ರಕಟಣೆ ಹೊರಡಿಸಿವೆ.

ಈಗಾಗಲೇ ಸೌದಿ ಅರೇಬಿಯಾದಲ್ಲಿರುವ ಭಟ್ಕಳ ಮುಸ್ಲಿಂ ಜಮಾತೆ ಈಗಾಗಲೇ ಅಧಿಕೃತ ಪ್ರಕಟಣೆ ಹೋರಡಿಸಿದ್ದು, ಉಳಿದ ಅರಬ್ ದೇಶಗಳ ಜಮಾತೆಗಳು ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತೀವೆ.

ಸೌದಿ ಅರೇಬಿಯಾದ ರಿಯಾದ್‌, ದಮ್ಮಾಮ ಹಾಗೂ ಜಿದ್ದಾದಲ್ಲಿ 1,250 ಮತದಾರರಿದ್ದಾರೆ. ಈ ಬಾರಿಯ ಕೆನರಾ ಕ್ಷೇತ್ರದಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಬಾರದು ಎಂದು ನಿರ್ಧರಿಸಿರುವ ಮುಸ್ಲಿಂ ಜಮಾತ್‌ಗಳು 2 ಟಿಕೆಟ್‌ ಆಫರ್‌ ನೀಡಿವೆ.

ADVERTISEMENT

ಸೌದಿಅರೇಬಿಯಾದ ಭಟ್ಕಳ ಮುಸ್ಲಿಂ ಸಂಘಟನೆಗಳ ನಿರ್ಧಾರದಿಂದ ಉತ್ತೇಜಿತರಾಗಿರುವ ದುಬೈನಲ್ಲಿರುವ ಭಟ್ಕಳ ಮುಸ್ಲಿಂ ಜಮಾತ್‌ಗಳೂ ಈ ಬಗ್ಗೆ ಒಂದೆರಡು ದಿನಗಳಲ್ಲಿ ತನ್ನ ಸದಸ್ಯರಿಗೆ ಉಚಿತ ಟಿಕೆಟ್ ನೀಡುವ ಬಗ್ಗೆ ನಿರ್ಧರಿಸುವುದಾಗಿ ತಿಳಿಸಿವೆ.

‘ಈ ಬಾರಿ ಭಾರತದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಸ್ಲಿಂ ಜಮಾತೆಗಳು ವಿದೇಶಗಳಲ್ಲಿ ನೆಲೆಸಿರುವ ಎಲ್ಲ ಭಟ್ಕಳದ ಮತದಾರರು ಮತದಾನದಲ್ಲಿ ಪಾಲ್ಗೊಳ್ಳಬೇಕು. ಅಲ್ಲದೇ, ಮನುಷ್ಯತ್ವದ ಬಗ್ಗೆ ಕಾಳಜಿ ಇರುವ ಜಾತ್ಯತೀತ ವ್ಯಕ್ತಿ, ಪಕ್ಷಗಳ ಪರವಾಗಿ ಮತದಾನ ಮಾಡಬೇಕು’ ಎಂದು ಮುಖಂಡರು ಮತದಾರರನ್ನು ವಿನಂತಿಸಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ಲಭಿಸಿವೆ.

2013ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಇನಾಯಿತುಲ್ಲಾ ಶಾಬಂದ್ರಿ ಕಣದಲ್ಲಿದ್ದಾಗ ಅರಬ್ ರಾಷ್ಟ್ರದಲ್ಲಿರುವ ಭಾರತೀಯ ಮತದಾರರಿಗೆ ಉಚಿತ ಪ್ರಯಾಣ ಟಿಕೆಟ್ ನೀಡಲಾಗಿತ್ತು. ಈಗ ಎರಡನೇ ಬಾರಿಗೆ ಇಂತಹ ಘೋಷಣೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.