ADVERTISEMENT

ಮುಂಡಗೋಡ: ಗೋವಿನಜೋಳಕ್ಕೆ ಸೈನಿಕ ಹುಳು ಬಾಧೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2024, 15:31 IST
Last Updated 14 ಜೂನ್ 2024, 15:31 IST
ಸೈನಿಕ ಹುಳದ ಬಾಧೆಯಿಂದ ತತ್ತರಿಸಿರುವ ಗೋವಿನಜೋಳದ ಬೆಳೆ
ಸೈನಿಕ ಹುಳದ ಬಾಧೆಯಿಂದ ತತ್ತರಿಸಿರುವ ಗೋವಿನಜೋಳದ ಬೆಳೆ   

ಮುಂಡಗೋಡ: ತಾಲ್ಲೂಕಿನ ನಂದಿಗಟ್ಟಾ, ಬಾಚಣಕಿ, ಅಗಡಿ, ಚವಡಳ್ಳಿ ಸೇರಿದಂತೆ ಇನ್ನಿತರ ಕೆಲವೆಡೆ ಗೋವಿನಜೋಳ ಬೆಳೆಗೆ ಸೈನಿಕ ಹುಳ ಬಾಧೆ ಕಂಡು ಬಂದಿದೆ.

ಸುಮಾರು 20-25 ದಿನಗಳ ಅವಧಿಯ ಬೆಳೆ ಇದ್ದು, ಬೆಳೆದಿರುವ ಎಲೆಗಳನ್ನು ಕೀಟಗಳು ತಿಂದಿವೆ. ಆರಂಭಿಕ ಹಂತದಲ್ಲಿಯೇ ಕೀಟಬಾಧೆ ನಿಯಂತ್ರಣಕ್ಕೆ ರೈತರು ಮುಂದಾಗಬೇಕಿದೆ. ಕೀಟಬಾಧೆಯಿಂದ ಬೆಳೆಯ ಬೆಳವಣಿಗೆಯಲ್ಲಿ ಕುಂಠಿತವಾಗುವ ಸಾಧ್ಯತೆಯಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ಹಲವು ರೈತರು ಕೃಷಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ರೈತರ ಗದ್ದೆಗಳಿಗೆ ಭೇಟಿ ನೀಡಿ ವೀಕ್ಷಿಸಿದ್ದಾರೆ.

‘ಗೋವಿನಜೋಳ ಬೆಳೆ ಮೂವತ್ತು ದಿನಗಳಿರುವಾಗ ಕೀಟಬಾಧೆ ಕಂಡು ಬರುತ್ತದೆ. ಇದನ್ನು ಗಮನಿಸಿದ ಕೂಡಲೇ, ಬೆಳೆಯಲ್ಲಿ ಕೀಟಭಕ್ಷಕ ಪಕ್ಷಿಗಳಿಗೆ ಕುಳಿತುಕೊಳ್ಳಲು ಆಶ್ರಯತಾಣ ಒದಗಿಸಬೇಕು. ಪ್ರತಿ ಎಕರೆಗೆ ಕನಿಷ್ಠ ಹತ್ತರಷ್ಟಾದರೂ ಪಕ್ಷಿಗಳಿಗೆ ಆಶ್ರಯತಾಣ ಮಾಡಿದರೆ ಆರಂಭಿಕ ಹಂತದಲ್ಲಿಯೇ ಸೈನಿಕ ಹುಳಬಾಧೆಯನ್ನು ನಿಯಂತ್ರಿಸಲು ಸಾಧ್ಯ. ಸಸ್ಯ ಸಂರಕ್ಷಣಾ ಔಷಧಿಯು ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿದ್ದು, ರೈತರು ಇದನ್ನು ಉಪಯೋಗಿಸಬಹುದು’ ಎಂದು ಸಹಾಯಕ ಕೃಷಿ ನಿರ್ದೇಶಕ ಎಂ.ಎಸ್‌.ಕುಲಕರ್ಣಿ ಸಲಹೆ ನೀಡಿದ್ದಾರೆ.

ADVERTISEMENT

‘ಪ್ರತಿ ಲೀಟರ್‌ ನೀರಿಗೆ 0.2ರಿಂದ 0.4ಗ್ರಾಂ ಈಮಾಮೆಕ್ಟಿನ್‌ ಬೆಂಜೋಯೇಟ್‌ ಕೀಟನಾಶಕವನ್ನು ಬೆರೆಸಿ ಸಿಂಪಡಿಸುವುದರಿಂದಲೂ ಕೀಟಬಾಧೆಯನ್ನು ನಿಯಂತ್ರಿಸಬಹುದು’ ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.