ಯಲ್ಲಾಪುರ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ದುರಾಡಳಿತದಿಂದ ರಾಜ್ಯದ ಜನರ ನೆಮ್ಮದಿ ಹಾಳಾಗಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಪಟ್ಟಣದ ಅಡಿಕೆ ಭವನದಲ್ಲಿ ಮಂಗಳವಾರ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.
‘ಕಾಂಗ್ರೆಸ್ ಶಾಸಕರಿರುವ ಕಡೆ ಸಹ ಬಿಜೆಪಿ ಅತ್ಯಂತ ಹೆಚ್ಚು ಅಂತರದಿಂದ ಮುನ್ನಡೆ ಸಾಧಿಸಿದೆ. ಯಲ್ಲಾಪುರದಲ್ಲಿ ಸಹ ಕಾಂಗ್ರೆಸ್ ಪರವಾಗಿ ಅಧಿಕೃತ ಕೆಲಸ ಮಾಡಿದ ಶಾಸಕರಿದ್ದರೂ ಭಾರಿ ಅಂತರದ ಮತಗಳು ಬಿಜೆಪಿಗೆ ಬಂದಿವೆ’ ಎಂದರು.
ಬಿಜೆಪಿ ಗೆಲುವಿಗೆ ದುಡಿದ ಎಲ್ಲ ಕಾರ್ಯಕರ್ತರಿಗೆ ಅವರು ಕೃತಜ್ಞತೆ ಸಲ್ಲಿಸಿದರು.
ಸಂಸದರಾಗಿ ಆಯ್ಕೆಯಾದ ನಂತರ ಇದೇ ಮೊದಲ ಬಾರಿ ಯಲ್ಲಾಪುರಕ್ಕೆ ಬಂದ ಅವರಿಗೆ ಬಿಜೆಪಿ ಘಟಕದವರು ಶ್ರೀರಾಮನ ಚಿತ್ರ ನೀಡಿ ಗೌರವಿಸಿದರು. ಈ ವೇಳೆ ಎದುರಿದ್ದವರಿಗೆ ಚಿತ್ರ ಪ್ರದರ್ಶಿಸಿದ ಕಾಗೇರಿ ‘ಜೈಶ್ರೀರಾಮ್’ ಎಂದು ಘೋಷಣೆ ಕೂಗಿದರು. ಇದಕ್ಕೆ ನೆರೆದವರೆಲ್ಲ ದನಿಗೂಡಿಸಿದರು.
ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಮಾತನಾಡಿ, ‘ಯಲ್ಲಾಪುರದಲ್ಲಿ ಬಿಜೆಪಿ ಶಾಸಕರು ಇದ್ದಾರೆ ಎಂದು ನಾವು ಅಂದುಕೊಂಡಿದ್ದೆವು. ಆದರೆ ಶಾಸಕರಿಂದ ಆಗಬೇಕಾದ ಕೆಲಸಗಳಿಗೂ ಜನ ಸಂಸದರಿಗೆ ಮನವಿ ನೀಡುತ್ತಿದ್ದಾರೆ. ಇಲ್ಲಿ ಆಗಮಿಸಿ ಜನ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಇಲ್ಲಿ ಶಾಸಕರು ಇಲ್ಲ ಎಂಬಂತಾಗಿದೆ’ ಎಂದರು.
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಸ್. ಹೆಗಡೆ, ಪ್ರಮುಖರಾದ ಎಲ್.ಟಿ. ಪಾಟೀಲ, ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಉಮೇಶ ಭಾಗ್ವತ, ರಾಮು ನಾಯ್ಕ, ರೇಖಾ ಹೆಗಡೆ, ಶ್ಯಾಮಿಲಿ ಪಾಠಣಕರ, ಪ್ರಸಾದ ಹೆಗಡೆ, ನಟರಾಜ ಗೌಡರ್, ಚಂದ್ರಕಲಾ ಭಟ್ಟ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.