ಜೊಯಿಡಾ: ತಾಲ್ಲೂಕಿನಲ್ಲಿ ಶನಿವಾರ ಮಧ್ಯಾಹ್ನದಿಂದ ಗಾಳಿ ಸಹಿತ ಬಿರುಸಿನ ಮಳೆ ಬಿಳುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಭಾನುವಾರ ಅಣಶಿಯಿಂದ ಉಳಿವಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ದಿನವಿಡೀ ನೀರು ಹರಿದಿದ್ದು ಜನರು ಸಂಚಾರಕ್ಕೆ ಪರದಾಡುವಂತಾಯಿತು.
ಕುಂಬಾರವಾಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಲೋಲಿ ರಸ್ತೆಯಲ್ಲಿ ನಿರ್ಮಿಸಲಾಗಿದ್ದ ಕಿರು ಸೇತುವೆ ಮಳೆಗೆ ಕುಸಿದಿದ್ದು, ಜೊತೆಗೆ ಅಪ್ಪರ ಕಾನೇರಿ ಜಲಾಶಯ ತುಂಬುತ್ತಿದ್ದು ಕುಂಡಲ ಭಾಗದ ಎಂಟು ಹಳ್ಳಿಗಳ ಜನರು ಸಂಚಾರಕ್ಕೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಅಣಶಿಯಿಂದ ಜೊಯಿಡಾ ಮಧ್ಯದಲ್ಲಿ ಬೆಳಗಾವಿ-ಸದಾಶಿವಗಡ ರಾಜ್ಯ ಹೆದ್ದಾರಿಯಲ್ಲಿ ಬಹುತೇಕ ಕಡೆಗಳಲ್ಲಿ ನೀರು ಹರಿಯುತ್ತಿದ್ದು, ಮೊದಲೇ ಗುಂಡಿಗಳಿಂದ ತುಂಬಿರುವ ಹೆದ್ದಾರಿಯಲ್ಲಿ ಜನ ಸಂಚಾರಕ್ಕೆ ಕಷ್ಟ ಎದುರಾಯಿತು.
ಗ್ರಾಮೀಣ ಪ್ರದೇಶದಲ್ಲಿ ಮಳೆಗೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ತೇರಾಳಿ, ಡಿಗ್ಗಿ, ಅಣಶಿ, ಉಳವಿ, ಅನಮೋಡ, ಬಜಾರಕುಣಂಗ ಭಾಗದ ಬಹುತೇಕ ಹಳ್ಳಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.